ಚಿಕ್ಕಮಗಳೂರು: ಬಡರೈತನ ಆರ್ಥಿಕ ದಿವಾಳಿಗೆ ಕಾರಣವಾಗಿರುವ ಎಚ್.ಡಿ.ಎಫ್ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಪ್ರತಿಕೃತಿಯೊಂದಿಗೆ ಅಣಕು ಶವಯಾತ್ರೆಯೊಂದಿಗೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ದಲಿತ ಸಂಘರ್ಷ ಸಮಿತಿ ಒಕ್ಕೂಟದ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.
ಹನುಮಂತಪ್ಪ ವೃತ್ತದಿಂದ ಅಣಕುಶವಯಾತ್ರೆಯೊಂದಿಗೆ ಮೆರವಣಿಗೆ ಆರಂಭಿಸಿ ಮಹಾತ್ಮಗಾಂಧಿ ರಸ್ತೆಯಲ್ಲಿ ತೆರಳಲು ಮುಂದಾಗುತ್ತಿದ್ದಂತೆ ನ್ಯಾಯಾಲದ ತಡೆಯಾಜ್ಞೆ ಇರುವುದರಿಂದ ಮೆರವಣಿಗೆ ನಡೆಸಲು ಸಾಧ್ಯವಿಲ್ಲವೆಂದು ತಿಳಿಸಿದ ಪೊಲೀಸ್ ಅಧಿಕಾರಿಗಳು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ, ಜಿಲ್ಲಾ ಸಂಚಾಲಕ ಬಾಚಿಗನಹಳ್ಳಿ ಮಂಜಯ್ಯ,ಭೀಮಯ್ಯ, ಪುರದ ಚಂದ್ರಶೇಖರ್,ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತ ಕುಟುಂಬಕ್ಕೆ ನ್ಯಾಯದೊರಕಿಸಿಕೊಡುವಂತೆ ಬ್ಯಾಂಕಿನ ಸಮೀಪ ಕಳೆದ ಒಂದು ತಿಂಗಳಿನಿಂದ ಸಂಘಟನೆ ಮುಖಂಡರು ಹಗಲು-ರಾತ್ರಿ ಧರಣ ನಡೆಸುತ್ತಿದ್ದಾರೆ. ಈ ಸ್ಥಳಕ್ಕೆ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಪ್ರತಿಕೃತಿಯನ್ನು ತೆಗೆದಕೊಂಡು ಹೋಗಿ ಧರಣ ಮುಂದುವರೆಸಲು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಮುಖಂಡರು ಮುಂದಾಗುತ್ತಿದ್ದಂತೆ ಪೊಲೀಸರು ಮೆರವಣಿಗೆಗೆ ಅವಕಾಶನೀಡಲು ಪ್ರತಿಭಟನಾ ನಿರತರು ಮತ್ತು ಪ್ರತಿಕೃತಿಯನ್ನು ವಶಕ್ಕೆ ತೆಗೆದುಕೊಂಡರು.
ಎರಡನೇ ಹಂತವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ, ಚಿಕ್ಕಮಗಳೂರು ಶಾಸಕರ ಮನೆ ಮುಂದೆ, ಮೂಡಿಗೆರೆ ಶಾಸಕಿಯ ಮನೆಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದರೊಂದಿಗೆ ತಮಟೆ ಚಳವಳಿ, ಕರಪತ್ರ ಚಳವಳಿ, ಪಂಜಿನ ಮೆರವಣಿಗೆ, ಅರೆಬೆತ್ತಲೆ ಚಳವಳಿ ನಡೆಸಲು ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ.
ಉತ್ತಮ ರೀತಿಯ ಬದುಕುಕಟ್ಟಿಕೊಳ್ಳುವ ಕನಸಿನೊಂದಿಗೆ ಜೆಸಿಬಿ ಯಂತ್ರ ಖರೀದಿಸಲು ಬ್ಯಾಂಕ್ನಲ್ಲಿ ಸಾಲಮಾಡಿದ್ದು, ೭ ಲಕ್ಷ ಮುಂಗಡ ಹಣವನ್ನು ಬ್ಯಾಂಕಿಗೆ ಪಾವತಿಸಲಾಗಿದೆ. ೧೭ ತಿಂಗಳ ಕಂತು ಹಣ ೧೮ ಲಕ್ಷ ನೀಡಲಾಗಿದೆ.ಕೇವಲ ೨ ತಿಂಗಳ ಕಂತುಹಣ ನೀಡದಿರುವುದಕ್ಕೆ ನೋಟೀಸ್ಕೊಡದೆ, ಜೆಸಿಬಿ ಯಂತ್ರವನ್ನು ಸೀಜ್ಮಾಡಲಾಗಿದೆ. ಸಾಲಮರುಪಾವತಿಗೆ ಮುಂದಾದರೂ ವಶಪಡಿಸಿಕೊಂಡಿದ್ದ ಜೆಸಿಬಿ ಯಂತ್ರವನ್ನು ನೀಡದೆ ಹರಾಜುಹಾಕಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
Mock funeral procession against HDFC Bank
Leave a comment