ಚಿಕ್ಕಮಗಳೂರು: ಕುಡಿತದ ದಾಸನಾಗಿ, ಹೆಂಡತಿಯ ನಡತೆಯ ಮೇಲೆ ಇಲ್ಲಸಲ್ಲದ ಅನುಮಾನ ಪಟ್ಟು ಸೌದೆ ಬಡಿಗೆ ಹಾಗೂ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಪತ್ನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸತ್ತಿಹಳ್ಳಿ ಗ್ರಾಮದ ನಿವಾಸಿ ಯೋಗೇಶ್ ಎಂಬಾತನೇ ಪತ್ನಿಯ ಮೇಲೆ ಪೈಶಾಚಿಕ ದೌರ್ಜನ್ಯ ಎಸಗಿದ ಗಂಡ. ಈತನಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಎರಡುವರೆ ವರ್ಷದ ಗಂಡು ಮಗುವಿದೆ. ಯೋಗೇಶನಿಗೆ ಪ್ರತಿದಿನ ವಿಪರೀತ ಮದ್ಯಪಾನ ಮಾಡುವ ಹವ್ಯಾಸವಿದ್ದು, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಇದೇ ಕಾರಣಕ್ಕೆ ಪ್ರತಿದಿನ ಮನೆಯಲ್ಲಿ ಇಲ್ಲಸಲ್ಲದ ಗಲಾಟೆ ತೆಗೆದು ಪತ್ನಿ ವಾಗ್ಗೇವಿ ಅವರ ಮೇಲೆ ಅನುಮಾನಪಡುತ್ತಿದ್ದ ಎನ್ನಲಾಗಿದೆ.
ವಾಗ್ಗೇವಿ ಅವರು ರೇಷನ್ ಕಾರ್ಡ್ ಮಾಡಿಸಲು ಹೊರಗಡೆ ಹೋಗಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಯೋಗೇಶ್, ಮರುದಿನ ಬೆಳಗ್ಗೆ ವಾಗ್ಗೇವಿ ಅವರು ಮನೆಯ ಹೊರಗೆ ಕೆಲಸ ಮಾಡುತ್ತಿದ್ದಾಗ ವಿಪರೀತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ ಮರದ ಸೌದೆ ಬಡಿಗೆಯಿಂದ ಅವರ ಎಡ ತೋಳು, ಭುಜ, ಬಾಯಿ, ಬಲತೊಡೆ ಹಾಗೂ ಬೆನ್ನಿಗೆ ಮನಬಂದಂತೆ ಹೊಡೆದು ಗಾಯಗೊಳಿಸಿದ್ದಾನೆ.
ಕೈಗೆ ಸಿಕ್ಕ ವಸ್ತುಗಳನ್ನು ಅವರ ಮೇಲೆ ಬೀಸಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದಿದ್ದಾರೆ. ತಾಯಿ-ಮಗುವಿನ ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದು ಜಗಳ ಬಿಡಿಸಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ನಂತರ ನೊಂದ ಮಹಿಳೆ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರನ್ನು ಕರೆಯಿಸಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗ್ರಾಮಸ್ಥರು ಗಂಡನಿಗೆ ಬುದ್ದಿ ಹೇಳುವುದಾಗಿ ಸಮಾಧಾನಪಡಿಸಿ ವಾಗ್ಗೇವಿ ಅವರನ್ನು ಮನೆಗೆ ಕಳಿಸಿದ್ದರು. ಆದರೆ ಅಷ್ಟರಲ್ಲೇ ಮನೆಗೆ ಬಂದ ಯೋಗೇಶ್, “ನನ್ನ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತೀಯಾ?” ಎಂದು ಕೆರಳಿ ಕೆಂಡವಾಗಿ ವಾಗ್ಗೇವಿ ಅವರ ಎದೆಯ ಭಾಗ ಹಾಗೂ ಎಡಗಣ್ಣಿಗೆ ಬಲವಾಗಿ ಗುದ್ದಿ ಮತ್ತೆ ದೌರ್ಜನ್ಯ ಎಸಗಿದ್ದಾನೆ.
ಸದ್ಯ ಗಂಡನ ನಿರಂತರ ಕಿರುಕುಳ ಹಾಗೂ ಹಲ್ಲೆಯಿಂದ ಬೇಸತ್ತ ವಾಗ್ಗೇವಿ ಅವರು ಆಲ್ಲೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿದ್ದು, ಪೊಲೀಸರು ಯೋಗೇಶ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Husband assaults wife in Sattihalli village
Leave a comment