ನರಸಿಂಹರಾಜಪುರ: ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರು ವ್ಯವಸಾಯದ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಂಡ ಬಳಿಕ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಕಂದಾಯ ಪಾವತಿಸದೇ ಸರ್ಕಾರಕ್ಕೆ ₹15 ರಿಂದ ₹20 ಲಕ್ಷ ನಷ್ಟವನ್ನುಂಟು ಮಾಡಿ ವಂಚಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಸಂಚಾಲಕ ಎಂ.ಆರ್.ರವಿಶಂಕರ್ ಆರೋಪಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಮೆಣಸೂರು ಗ್ರಾಮದ ಸ.ನಂ121/2 ಮತ್ತು ಸ.ನಂ 121/1 ಮಾಜಿ ಶಾಸಕರಿಗೆ ಮತ್ತು ಅವರ ಪರಿವಾರಕ್ಕೆ ಸೇರಿದ್ದು ಮೊದಲಿಗೆ ಕೃಷಿ ಭೂಮಿ ಅನ್ಯಕ್ರಾಂತಗೊಂಡಿದ್ದವು. ಇದರಲ್ಲಿ ಮತ್ತೊಮ್ಮೆ ಸ.ನಂ121/1 ಕಂದಾಯಕ್ಕೆ ಬಂದಿರುತ್ತದೆ. ಈ ಜಮೀನಿನಲ್ಲಿ ಚರಂಡಿ, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿದ ಬಗ್ಗೆ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ತನಿಖೆ ನಡೆಸಿ ಈ ಅನ್ಯಕ್ರಾಂತ ಪ್ರದೇಶದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಿದ್ದು ಕೃಷಿ ಉದ್ದೇಶಕ್ಕೆ ಜಮೀನು ಬಳಕೆಯಾಗಿಲ್ಲ. 0–23 ಗುಂಟೆ ನಕಾಶೆ ಕಂಡ ಕೆರೆಯನ್ನು ಖಾತೆದಾರರು ಒತ್ತುವರಿ ಮಾಡಿರುವುದು ಕಂಡು ಬಂದಿದೆ. ಸಂ.ನಂ 78ರಲ್ಲಿ 0–03 3/4 ಎ.ಗುಂ ಸರ್ಕಾರಿ ಪ್ರದೇಶದಲ್ಲಿ 2 ವಾಸದ ಮನೆ ನಿರ್ಮಿಸಿರುವುದು ಕಂಡು ಬಂದಿರುವ ಬಗ್ಗೆ ವರದಿ ನೀಡಿದ್ದಾರೆ ಎಂದರು.
ಅಧಿಕಾರ ದುರುಪಯೋಗ ಮಾಡಿ ಕೊಂಡು ಜಿಲ್ಲಾಡಳಿತದ ದಾರಿತಪ್ಪಿಸಿ ಕಂದಾಯ ಭೂಮಿಯಲ್ಲಿ ರಸ್ತೆ ಚರಂಡಿ ನಿರ್ಮಿಸಿದ್ದಾರೆ ಎಂದು ದೂರಿದರು.
ಕೊಪ್ಪದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಿನಿ ವಿಧಾನಸೌಧಗಳು ಸೋರುತ್ತಿವೆ ಎಂದು ಮುಖಂಡರೊಬ್ಬರು ಆರೋಪಿಸಿದ್ದಾರೆ. ನರಸಿಂಹರಾಜಪುರದಲ್ಲಿ ಕೋಟಿ ಗಟ್ಟಲೆ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಿಸಿ ಹದಿನೈದು ವರ್ಷದಲ್ಲಿಯೇ ಶಿಥಿಲಾವಸ್ಥೆಗೆ ತಲುಪಿದ್ದು ಇದನ್ನು ನಿರ್ಮಿಸಿರುವ ಗುತ್ತಿಗೆದಾರನ ವಿರುದ್ಧ ಸರ್ಕಾರ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪಟ್ಟಣದ ವಾರ್ಡ್ ನಂ7ರ ಅಸೆಸ್ ಮೆಂಟ್ ನಂ 432,438,690,691 ನಿವೇಶನವನ್ನು ಮಾಜಿ ಶಾಸಕರು ತಮ್ಮ ಪತ್ನಿ ಹೆಸರಿನಲ್ಲಿ ಖರೀದಿಸಿದ್ದು ಇದು 1962–63ರಲ್ಲಿ ಚಂದ್ರಶೇಖರ್ ಭಟ್ ಮತ್ತು ಕುಟುಂಬದ ಆಸ್ತಿಯಾಗಿದೆ. ಇದರ ದಾಖಲೆ ಮತ್ತು ಮಾಜಿ ಶಾಸಕರು ನೋಂದಣಿ ಮಾಡಿಸಿರುವ ಪತ್ರಕ್ಕೂ ವ್ಯತ್ಯಾಸವಿದ್ದು ಹೆಚ್ಚುವರಿ ಜಾಗವನ್ನು ಪ್ರತಿಷ್ಠಿತ ಸಂಸ್ಥೆಗೆ ಮಾರಾಟ ಮಾಡಿ ಮೋಸ ಎಸಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಎಚ್.ಎಂ.ಮನು ಮಾತನಾಡಿ, ಮಾಜಿ ಶಾಸಕರು ಸಭೆಗಳಲ್ಲಿ ವೈಯಕ್ತಿಕವಾಗಿ ನಿಂದಿಸುತ್ತಿದ್ದಾರೆ. ಇವರು ಎಷ್ಟು ಹಣ ಕೊಟ್ಟಿದ್ದಾರೆ. ಯಾವ ರೀತಿ ಆಹಾರ, ಬಟ್ಟೆ ನೀಡಿದ್ದಾರೆ ಎಂದು ಬಹಿರಂಗ ಪಡಿಸಲಿ. ಕಾರ್ಯಕರ್ತರ ಪರಿಶ್ರಮದಿಂದ ಶಾಸಕ, ಮಂತ್ರಿಯಾಗಿ ಪಿಂಚಣಿ ಪಡೆಯುತ್ತಿದ್ದಾರೆ. ಮಾಜಿ ಶಾಸಕರ ವಿರುದ್ಧ ದಾಖಲಾಗಿದ್ದ ಗಂಭೀರ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ದೇವಸ್ಥಾನದಲ್ಲಿ ಬಂದು ಆಣೆ ಪ್ರಮಾಣ ಮಾಡಬೇಕು. ನನ್ನಿಂದ ಮಾನನಷ್ಟ ಆಗಿದ್ದರೆ ಇದುವರೆಗೆ ಯಾಕೆ ಮಾನನಷ್ಟ ಮೊಕದ್ದಮೆ ದಾಖಲಿಸಲಿಲ್ಲ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು.
ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷೆ ಗೇರುಬೈಲು ನಟರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿಯವರು ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದು ಇದರ ಬಗ್ಗೆ ಹೋರಾಟ ಮಾಡಲಾಗುವುದು ಎಂದರು. ಮುಖಂಡರಾದ ಪಿ.ಆರ್.ಸದಾಶಿವ, ಪ್ರಶಾಂತ್ ಶೆಟ್ಟಿ, ಮಹೇಶ್ ಮಾತನಾಡಿದರು. ಮುಖಂಡರಾದ ಈ.ಸಿ.ಜೋಯಿ, ಜುಬೇದಾ, ಎಸ್.ಡಿ.ರಾಜೇಂದ್ರ, ಬೆನ್ನಿ, ಬಿನು, ರತನ್ ಗೌಡ, ದೇವಂತ್ ಗೌಡ, ನಂದೀಶ್, ಮುನಾವರಪಾಷ, ಬಿ.ಎಸ್.ಸುಬ್ರಹ್ಮಣ್ಯ, ಸಾಜು ಮತ್ತಿತರರಿದ್ದರು.
Ex-MLA Jivaraj tax evasion to the government
Leave a comment