ಚಿಕ್ಕಮಗಳೂರು: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ರೂಪಿಸಲು ೧೪ನೇ ಜಿಲ್ಲಾ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ನೂತನ ಜಿಲ್ಲಾ ಕಾರ್ಯದರ್ಶಿ ಜಿ.ರಘು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಿವೇಶನ ರಹಿತರು ಮತ್ತು ವಸತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ ಎಂದರು.
ಆ.೩೦, ೩೧ ರಂದು ಮತ್ತು ಸೆ.೧ ರಂದು ಕಲ್ಬುರ್ಗಿಯಲ್ಲಿ ನಡೆಯಲಿರುವ ಸಿಪಿಐ ರಾಜ್ಯ ಸಮ್ಮೇಳನದ ನಂತರ ಜಿಲ್ಲಾಮಟ್ಟದಲ್ಲಿ ವಿವಿಧ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವಂತೆ ಒತ್ತಾಯಿಸಿ ಹೋರಾಟವನ್ನು ರೂಪಿಸಲಾಗುವುದೆಂದು ಹೇಳಿದರು.
ಸ್ವತಂತ್ರ ಬಂದು ೭೮ ವರ್ಷ ಕಳೆದರೂ ನಿವೇಶನ ಮತ್ತು ಮನೆಯನ್ನು ನೀಡದಿರುವ ಬಗ್ಗೆ ಖಂಡಿಸಿದ ಅವರು, ಹಲವಾರು ವರ್ಷಗಳಿಂದ ಕಾಫಿತೋಟದಲ್ಲಿ ಬಡ ಕೂಲಿಕಾರ್ಮಿಕರು ವಾಸಿಸುತ್ತಿದ್ದು, ಬಾಡಿಗೆ ಒಂದು ಮನೆಯಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿವೆ ಎಂದು ವಿವರಿಸಿದರು.
ಈ ಸಂಬಂಧ ನಿವೇಶನ ರಹಿತರ ಪರವಾಗಿ ಸಿಪಿಐ ಧರಣಿ ಸತ್ಯಾಗ್ರಹ ಮತ್ತು ಚಳುವಳಿಗಳನ್ನು ನಡೆಸಿದ ಪರಿಣಾಮ ನೂರಾರು ಕುಟುಂಬಗಳು ಸೂರು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ರೈತರು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳು ಹಾನಿಮಾಡಿ ಬೆಳೆ ಕೈಗೆ ಸಿಗದಂತೆ ಮಾಡುತ್ತಿರುವ ಜೊತೆಗೆ ರಸಗೊಬ್ಬರ ಬೆಲೆ ಗಗನಕ್ಕೇರಿದ್ದು, ನಿಗದಿತ ಸಮಯಕ್ಕೆ ರಸಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆಂದು ತಿಳಿಸಿದರು.
ರಾಜ್ಯ ಮತ್ತು ಕೇಂದ್ರಸರ್ಕಾರ ಈ ಕೂಡಲೇ ಸಬ್ಸಿಡಿ ದರದಲ್ಲಿ ರೈತರಿಗೆ ಸರಳವಾಗಿ ರಸಗೊಬ್ಬರ ಸಿಗುವಂತೆ ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಸಿಪಿಐ ರಾಜ್ಯಮಂಡಳಿ ಸದಸ್ಯ ಹೆಚ್.ಎಂ. ರೇಣುಕಾರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಫಾರಂ ನಂ.೫೦, ೫೩ ಯಲ್ಲಿ ಕೆಲವರು ಭೂಮಿ ಪಡೆಯಲು ಮುಂದಾಗಿದ್ದರೆ, ಇನ್ನು ಕೆಲವರು ಭೂಮಿ ಕಬಳಿಸಲು ಹೋರಾಟ ನಡೆಸುತ್ತಿದ್ದಾರೆಂದು ದೂರಿದರು.
ಫಾರಂ ನಂ.೫೭ ರಲ್ಲಿ ಕಾಫಿ ಖರಾಬು ಭೂಮಿಯನ್ನು ನೀಡಲು ಬರುವುದಿಲ್ಲ. ಈ ಸಂಬಂಧ ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದ್ದರೆ, ಕಡಿಮೆ ಅರ್ಜಿಗಳು ಬಂದಿರುವ ಪರಿಣಾಮ ಭೂಮಾಲೀಕರು ಕಬಳಿಸಲು ಯತ್ನಿಸುತ್ತಿದ್ದಾರೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರ್ಯದರ್ಶಿಗಳಾದ ಹೆಡದಾಳ್ ಕುಮಾರ್, ಹೆಚ್.ಕೆ. ಸೋಮೇಗೌಡ, ಮುಖಂಡರಾದ ಜಿ. ರಮೇಶ್, ವಸಂತ್ಕುಮಾರ್ ಉಪಸ್ಥಿತರಿದ್ದರು.
CPI’s struggle on burning issues in the district
Leave a comment