ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು-ಬಯಲುಸೀಮೆಯಲ್ಲಿ ಮುಂದುವರಿದ ಮಳೆ ಅಬ್ಬರ, ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದ ರೈತಾಪಿ ವರ್ಗದವರು ಕಂಗಾಲಾಗಿದ್ದಾರೆ.
ಮಲೆನಾಡಿನಲ್ಲಿ ಕಾಫಿ, ಅಡಿಕೆ ಕೊಯ್ಲಿಗೆ ಬಂದಿದ್ದು, ಮಳೆಯಿಂದಾಗಿ ಬೆಳೆಗಳು ನೆಲ ಸೇರುತ್ತಿವೆ. ಕೊಯ್ದು ಕಾರ್ಯಕ್ಕೆ ಅಡ್ಡಿಯಾಗಿದೆ. ಅತ್ತ ಬಯಲು ಪ್ರದೇಶದಲ್ಲಿ ರೈತರು ಬೆಳೆದ ಆಹಾರದಾನ್ಯಗಳು ಮತ್ತು ತರಕಾರಿ ಬೆಳೆಗಳು ಮಳೆಯಿಂದ ಕೊಳೆತು ಹೋಗುತ್ತಿವೆ.
ಮಳೆಯಿಂದ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಬಿದ್ದು ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ದೇವಗೊಂಡನಹಳ್ಳಿ ಎಂಬಲ್ಲಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದೆ.
ಹೊಲದಲ್ಲಿ ಎಮ್ಮೆ ಮೇಯಿಸಲು ತೆರಳಿದ್ದ ರೈತರೊಬ್ಬರು ಹಳ್ಳದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ದೇವಗೊಂಡನಹಳ್ಳಿ ಗ್ರಾಮದ ರೈತ ಲಕ್ಷ್ಮಣ್ ಗೌಡ (45) ಮೃತ ದುರ್ದೈವಿ.
ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದ ಲಕ್ಷ್ಮಣಗೌಡ ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಬುಧವಾರ ರಾತ್ರಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಹಲವು ಕಡೆಗಳಲ್ಲಿ ಅನಾಹುತ ಸಂಭವಿಸಿದೆ. ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ನಿರಂತರ ಮಳೆಯಿಂದ ರೈಲ್ವೇ ಹಳಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.
ರೈಲ್ವೆ ಹಳಿಯ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿ ಬೇಸ್ ಗಳು ಲಯತಪ್ಪಿದ್ದವು., ರೈಲ್ವೆ ಸಿಬ್ಬಂದಿಗಳ ಸಮಯ ಪ್ರಜ್ಞೆಗೆ ತಪ್ಪಿದ ಭಾರೀ ಅನಾಹುತ, ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲು ಕಣಿವೆ ರೈಲ್ವೆ ಸ್ಟೇಷನ್ ಸಿಬ್ಬಂದಿಗಳಿಂದ ರೈಲು ಚಾಲಕನಿಗೆ ಮಾಹಿತಿ ನೀಡಿದ್ದು, ಚಲಿಸುತ್ತಿದ್ದ ರೈಲನ್ನ ತಕ್ಷಣವೇ ನಿಲ್ಲಿಸಿದ ಚಾಲಕ, ಹಳಿ ದುರಸ್ಥಿ ಪಡಿಸಿದ ಸಿಬ್ಬಂದಿಗಳು, 30 ನಿಮಿಷ ನಿಂತಲ್ಲೇ ನಿಂತ ರೈಲು ನಂತರ ತನ್ನ ಪ್ರಯಾಣ ಮುಂದುವರಿಸಿದೆ.
Body of Devagondanahalli farmer found in overflowing canal
Leave a comment