ಚಿಕ್ಕಮಗಳೂರು: ಜಿಲ್ಲೆಯ ಕೆಲವು ಕಡೆ ಉಪ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.
ಅವರು ಈ ಕುರಿತು ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನೇ ದಿನೇ ಜನಸಂಖ್ಯೆ, ವ್ಯಾಪಾರ ವಹಿವಾಟುಗಳು, ವಾಣಿಜ್ಯ ವ್ಯವಹಾರಗಳು ಹೆಚ್ಚಾಗುತ್ತಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಪೊಲೀಸ್ ಠಾಣೆಗಳ ಕೊರತೆ ಕಡಿಮೆ ಇರುವುದರಿಂದ ಗಲಾಟೆ ಹಾಗೂ ಇನ್ಯಾವುದೇ ಅಹಿತಕರ ಘಟನೆಗಳು ನಡೆದಾಗ ಪೊಲೀಸರು ತಕ್ಷಣ ಸ್ಪಂದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಜನ ಜಂಗುಳಿ ಹೆಚ್ಚಿರುವ ಹೋಬಳಿ ಅಥವಾ ಗ್ರಾಮಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಪೊಲೀಸ್ ಉಪ ಠಾಣೆಗಳನ್ನು ಸ್ಥಾಪಿಸಬೇಕಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ೧೮೨ ಹಳ್ಳಿಗಳು ಒಳಗೊಂಡಿವೆ. ಈ ಠಾಣೆಗೆ ಏಕ ಕಾಲದಲ್ಲಿ ಎಲ್ಲಾದರೂ ಗಲಾಟೆ, ಗದ್ದಲ, ಘರ್ಷಣೆ ಉಂಟಾದಲ್ಲಿ ಇರುವ ಪೊಲೀಸ್ ಹಾಗೂ ವಾಹನಗಳನ್ನು ಬಳಸಿಕೊಂಡು ನಿರ್ದಿಷ್ಟ ಸಮಯದಲ್ಲಿ ಸ್ಪಂದಿಸಲು ಆಗುವುದಿಲ್ಲ ಎಂದಿದ್ದಾರೆ.
ತಾಲ್ಲೂಕಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಇನಾಂ ದತ್ತಾತ್ರೇಯ ಪೀಠ ಇನ್ನು ಮುಂತಾದ ಪ್ರೇಕ್ಷಣಿಯ ಪ್ರವಾಸಿ ತಾಣಗಳಿಗೆ ವಾರಂತ್ಯದಲ್ಲಿ ಹಾಗೂ ಸರಣಿ ರಜೆಗಳ ದಿನದಲ್ಲಿ ಅತಿ ಹೆಚ್ಚು ಪ್ರವಾಸಿಗರು ಬರುವುದರಿಂದ ಅಪಘಾತ, ಟ್ರಾಫಿಕ್ ಜಾಮ್, ಕ್ಷÄಲ್ಲಕ ಕಾರಣಗಳಿಂದ ಗಲಾಟೆ ವಿಕೋಪಕ್ಕೆ ಹೋಗುವುದುಂಟು ಆ ಸಂದರ್ಭದಲ್ಲಿ ಪೊಲೀಸರು ಗಲಭೆ ನಡೆದಿರುವ ಸ್ಥಳಕ್ಕೆ ಧಾವಿಸಲು ಸಾಹಸ ಪಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೆಚ್ಚು ಪೊಲೀಸ್ ಗಸ್ತನ್ನು ನಿಯೋಜಿಸಬೇಕು. ಬೆಳವಾಡಿ, ಕಳಸಾಪುರ ಗ್ರಾಮಗಳಲ್ಲಿ ಜನಸಂಖ್ಯೆ ಅತಿ ಹೆಚ್ಚು ಇರುವುದರಿಂದ ಇಲ್ಲಿಯೂ ಕೂಡ ಉಪ ಪೊಲೀಸ್ ಠಾಣೆಯನ್ನು ತೆರೆಯಬೇಕು. ನಗರಸಭೆ ವ್ಯಾಪ್ತಿಯ ಕಲ್ಲುದೊಡ್ಡಿ, ಶಾಂತಿನಗರದಲ್ಲಿಯೂ ಕೂಡ ಉಪ ಪೊಲೀಸ್ ಠಾಣೆ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದಾರೆ.
ನಗರದೆಲ್ಲಡೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಮಾದಕ ವ್ಯಸನಿಗಳು ಹೆಚ್ಚಾಗಿದ್ದಾರೆ. ನಗರದ ಸುತ್ತಮುತ್ತ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳು, ಖಾಲಿ ನಿವೇಶನಗಳು, ನಿರ್ಜನ ಪ್ರದೇಶಗಳಲ್ಲಿ, ಸರ್ಕಾರಿ ಶಾಲಾ ಕಟ್ಟಡದ ಒಳಗೆ, ಜಿಲ್ಲಾ ಆಟದ ಮೈದಾನ, ಉದ್ಯಾನವನಗಳಲ್ಲಿ ಇವರ ಉಪಟಳಗಳು ರಾತ್ರಿ ಸಮಯದಲ್ಲಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.
ನಗರ ಪ್ರದೇಶದಲ್ಲಿ ಮದ್ಯ, ಮಾದಕ ವ್ಯಸನಿಗಳು ಬಸ್ ನಿಲ್ದಾಣ, ಚಿತ್ರಮಂದಿರಗಳು, ಹೊಟೇಲ್ಗಳ ಹತ್ತಿರ ಹಾಗೂ ಜನಜಂಗುಳಿ ಇರುವ ಸ್ಥಳಗಳಲ್ಲಿ ಸುಮ್ಮನೆ ಗಲಾಟೆ ಮಾಡುವುದು ಮತ್ತು ಹೊರ ರಾಜ್ಯದಿಂದ ಬರುವ ಪ್ರವಾಸಿಗರಿಗೆ ತೊಂದರೆ ಕೊಡುವುದು ಹೆಚ್ಚಾಗಿದೆ. ಆದ್ದರಿಂದ ರಾತ್ರಿ ಸಮಯದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ರಾತ್ರಿ ಪಾಳೆಯಲ್ಲಿ ಪುರುಷ ಪೊಲೀಸ್ ಸಿಬ್ಬಂದಿಗಳನ್ನು ಗಸ್ತಿಗೆ ಬಳಸಬೇಕು. ಗ್ರಾಮಾಂತರ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಸುಸಜ್ಜಿತವಾದ ಕ್ವಾಟ್ರಸ್ ನಿರ್ಮಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ನಗರ ಪ್ರದೇಶದಿಂದ ಓಡಾಡುತ್ತಿದ್ದು, ಅವರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿಯೇ ಕರ್ತವ್ಯ ನಿರ್ವಹಿಸಲು ಸುಸಜ್ಜಿತವಾದ ಕ್ವಾಟ್ರಸ್ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ವಾಹನ ದಟ್ಟಣೆ ಅತೀ ಹೆಚ್ಚಾಗಿದ್ದು, ವಾಹನ ದಟ್ಟಣೆ ನಿಯಂತ್ರಿಸಲು ಟಸ್ಕರ್ ಅವಶ್ಯಕತೆ ಇದೆ. ಕಳೆದ ೧೨ ವರ್ಷಗಳಿಂದ ಟಸ್ಕರ್ ಇಲ್ಲದಿರುವುದರಿಂದ ಸಂಚಾರಿ ಪೊಲೀಸರಿಗೆ ವಾಹನ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಗರಕ್ಕೆ ೨ ಟಸ್ಕರ್ ವಾಹನಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.
Home Minister urged to open sub-police stations
Leave a comment