ಆಲ್ದೂರು: ಅಡುಗೆ ಮನೆಯ ನೆಲದ ಮೇಲೆ ಬಿದ್ದಿದ್ದ ನೀರನ್ನು ಗಮನಿಸದೆ ಟೈಲ್ಸ್ ಮೇಲೆ ಕಾಲಿಟ್ಟು ಜಾರಿ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋರಣ ಮಾವು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತೋರಣ ಮಾವು ಗ್ರಾಮದ ಚಂದ್ರೇಗೌಡ ಎಂದು ಗುರುತಿಸಲಾಗಿದೆ. ಅವರ ಪತ್ನಿ ವನಜಾಕ್ಷಿ ಅವರು ನೀಡಿದ ದೂರಿನ ಆಧಾರದ ಮೇಲೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಚಂದ್ರೇಗೌಡ ಅವರು ಆಗಸ್ಟ್ 27ರಂದು ಬೆಳಗ್ಗೆ ತೋಟಕ್ಕೆ ತೆರಳಿ ಮಧ್ಯಾಹ್ನ ಸುಮಾರು 2 ಗಂಟೆಗೆ ಮನೆಗೆ ವಾಪಸ್ ಬಂದಿದ್ದರು. ಊಟ ಮಾಡಿದ ಬಳಿಕ ಸ್ನಾನ ಮಾಡಿ, ಒದ್ದೆಯಾದ ಟವಲ್ನ್ನು ಒಣಗಿಸಲು ಮಧ್ಯಾಹ್ನ ಸುಮಾರು 3.15ರ ವೇಳೆಗೆ ಅಡುಗೆ ಮನೆಯಲ್ಲಿದ್ದ ಒಲೆಯ ಬಳಿಗೆ ತೆರಳಿದ್ದರು.
ಅಡುಗೆ ಮನೆಯ ಟೈಲ್ಸ್ ನೆಲದ ಮೇಲೆ ನೀರು ಚೆಲ್ಲಿದ್ದುದನ್ನು ಗಮನಿಸದೆ ಅದರ ಮೇಲೆ ಕಾಲಿಟ್ಟಾಗ ಕಾಲು ಜಾರಿ ಹಿಂಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರು ನೋವಿನಿಂದ ಕೂಗಿಕೊಂಡಿದ್ದು, ಮನೆಯಲ್ಲಿದ್ದ ಸೊಸೆಯರಾದ ರಶ್ಮಿ ಮತ್ತು ಸುಷ್ಮಿತಾ ಅವರು ಬಂದು ಅವರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ.
ವಿಷಯ ತಿಳಿದು ಪುತ್ರ ಸಂತೋಷ್ ಅವರು ಸ್ಥಳಕ್ಕೆ ಬಂದು ತಂದೆಯನ್ನು ಕಾರಿನಲ್ಲಿ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಸಂತೋಷ್ ಹಾಗೂ ಸೊಸೆ ಸುಷ್ಮಾ ಅವರು ಆಂಬ್ಯುಲೆನ್ಸ್ ಮೂಲಕ ಚಿಕ್ಕಮಗಳೂರಿನ ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಚಂದ್ರೇಗೌಡ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಬಿದ್ದು ಉಂಟಾದ ಆಘಾತದಿಂದ ಹೃದಯಾಘಾತವಾಗಿರಬಹುದು ಅಥವಾ ಬೇರೆ ಯಾವುದಾದರೂ ಕಾರಣದಿಂದ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದು, ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪತ್ನಿ ವನಜಾಕ್ಷಿ ದೂರಿನಲ್ಲಿ ತಿಳಿಸಿದ್ದಾರೆ. ಮೃತರ ಅಂತ್ಯಕ್ರಿಯೆಗೆ ಅನುಮತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ದೂರಿನ ಆಧಾರದ ಮೇಲೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ 18/2026, ಕಲಂ 194 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Farmer dies after slipping on tiles in Aldur
Leave a comment