ಕಡೂರು: ತೆಂಗಿನಕಾಯಿ ಕದ್ದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ಪಾತೇನಗಳ್ಳಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಶಿವಮ್ಮ (32) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿಯ ಪ್ರಕಾರ, ಪಾತೇನಹಳ್ಳಿ ಗ್ರಾಮದ ಪಾಳುಬಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಶಿವಮ್ಮ ಅವರು ತೋಟದ ಮಾರ್ಗವಾಗಿ ಮತ್ತೊಂದು ಜಾಗಕ್ಕೆ ತೆರಳುತ್ತಿದ್ದ ವೇಳೆ, ಅವರ ಕೈಯಲ್ಲಿದ್ದ ತೆಂಗಿನಕಾಯಿಯನ್ನು ಗಮನಿಸಿದ ತೋಟದ ಮಾಲೀಕ ನವೀನ್, ಅದು ತಮ್ಮ ತೋಟದ್ದೇ ಎಂದು ಆರೋಪಿಸಿ ಜಗಳ ಆರಂಭಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ, “ನಾನು ಕರೆದಾಗ ಬರುವುದಿಲ್ಲ, ಈಗ ತೆಂಗಿನಕಾಯಿ ತೆಗೆದುಕೊಂಡು ಹೋಗುತ್ತೀಯಾ” ಎಂದು ನಿಂದಿಸುತ್ತಾ ನವೀನ್ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಬಳಿಕ ನವೀನ್ ಜೊತೆ ಕಲ್ಲೇಶ್ ಹಾಗೂ ದೀಪು ಕೂಡ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯ ವೇಳೆ ಮಹಿಳೆಯ ಬಟ್ಟೆ ಹರಿದು, ಅವರನ್ನು ನೆಲಕ್ಕೆ ತಳ್ಳಿಹಾಕಿ ತುಳಿದಿರುವ ಆರೋಪವೂ ಕೇಳಿಬಂದಿದ್ದು, ಈ ಸಂಬಂಧ ನವೀನ್, ಕಲ್ಲೇಶ್ ಹಾಗೂ ದೀಪು ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Woman attacked by three people on charges of stealing coconuts
Leave a comment