ಚಿಕ್ಕಮಗಳೂರು: ಮಾನವ ಕಳ್ಳ ಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಜೀತ ಪದ್ಧತಿಗೆ ಒಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾದುದು. ಆ ನಿಟ್ಟಿನಲ್ಲಿ ಮಾಧ್ಯಮಗಳು ಸಹಕರಿಸಬೇಕು ಎಂದು ವಿಕಸನ ಸಂಸ್ಥೆ ಕಾರ್ಯನಿರ್ವಾಹಣಾಧಿಕಾರಿ ವಿಭಾ ವರ್ಗಿಸ್ ಹೇಳಿದರು.
ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ನಗರದ ಪ್ರೆಸ್ ಕ್ಲಬ್ನಲ್ಲಿ ವಿಸಕನ ಸಂಸ್ಥೆ ವತಿಯಿಂದ ಪತ್ರಕರ್ತರಿಗಾಗಿ ಗುರುವಾರ ಆಯೋಜಿಸಿದ್ದ ‘ಜೀತ ಕಾರ್ಮಿಕ ಮತ್ತು ಮಾನವ ಕಳ್ಳಸಾಗಾಣಿಕೆ’ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜೀತ ಕಾರ್ಮಿಕ ಪದ್ಧತಿ ಅಸ್ತಿತ್ವಕ್ಕೆ ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ ಕಾರಣ. ಸಮಾಜದ ಕೆಲವು ಸಂಪ್ರದಾಯ, ಜಮೀನ್ದಾರಿ ಪದ್ಧತಿಯಿಂದ ಭೂಮಿ ಕಳೆದುಕೊಂಡು ಜೀತ ಪದ್ಧತಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಈ ಪದ್ಧತಿ ತೊಗಲಿಸಲು 1976ರಲ್ಲಿ ಜೀತ ಪದ್ಧತಿ ರದ್ದತಿ ಕಾಯ್ದೆ ಜಾರಿಗೆ ಬಂದಿತು ಎಂದರು.
ಜೀತ ಕಾರ್ಮಿಕ ಪದ್ಧತಿ ಹೆಚ್ಚಾಗಿ ಮೀನು ಕೃಷಿ, ಇಟ್ಟಿಗೆ ಗೂಡು, ಅಕ್ಕಿ ಗಿರಣಿ, ತಂಬಾಕು ತಯಾರಿಕೆ ಘಟಕಗಳು, ಕಲ್ಲು ಕ್ವಾರಿಗಳು, ರೇಷ್ಮೆ ಕೃಷಿ ಘಟಕ, ರೆಸಾರ್ಟ್ಗಳು, ಮನೆ ಕೆಲಸ, ವ್ಯವಸಾಯ, ಕಾಫಿ ತೋಟಗಳು, ಶುಂಠಿ ಕೃಷಿ ಮಾಡುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಬಹುದು ಎಂದು ತಿಳಿಸಿದರು.
ಜೀತ ಪದ್ಧತಿ ತಡೆಗಟ್ಟಲು ಮಾಧ್ಯಮಗಳು ಜೀತ ಪದ್ಧತಿ ಕುರಿತಂತೆ ಜಾಗೃತಿ ವರದಿ ಪ್ರಕಟಿಸಬೇಕು. ಸಮಸ್ಯೆಗಳನ್ನು ಬಹಿರಂಗಪಡಿಸಬೇಕು. ಸರ್ಕಾರ ತನ್ನ ಜವಾಬ್ದಾರಿ ಖಾತರಿಪಡಿಸಬೇಕು ಎಂದು ಹೇಳಿದರು.
ಜೀತ ಪದ್ಧತಿ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಬೇಕು. ಜಿಲ್ಲಾ ಹಾಗೂ ಉಪವಿಭಾಗೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಜಾಗೃತಿ ಸಮಿತಿಗಳು ಜೀತ ಪದ್ಧತಿ ತಡೆಗಟ್ಟುವಿಕೆ ಮತ್ತು ಜೀತದಾಳುಗಳ ಪುನರ್ವಸತಿ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜೀತ ಪದ್ಧತಿ ತಡೆಗಟ್ಟುವ ಜಾಗೃತಿ ಅಭಿಯಾನ ನಡೆಯಬೇಕು ಎಂದು ತಿಳಿಸಿದರು.
ಜೀತ ಪದ್ಧತಿಯಿಂದ ಬಿಡುಗಡೆಯಾದ ಕುಟುಂಬ ಅಥವಾ ವ್ಯಕ್ತಿಗಳಿಗೆ ಸಂಪೂರ್ಣ ರಕ್ಷಣೆ ನೀಡಬೇಕು. ಸರ್ಕಾರದಿಂದ ದೊರೆಯುವ ಮೂಲ ಸೌಕರ್ಯಗಳಾದ ಆಧಾರ್ ಕಾರ್ಡ್, ಗುರುತಿನ ಚೀಟಿ, ಮನೆ, ಉದ್ಯೋಗಾವಕಾಶ ಮತ್ತು ಜೀವ ವಿಮೆಯನ್ನು ಜಿಲ್ಲಾಡಳಿತ ಒದಗಿಸಬೇಕು ಎಂದು ಹೇಳಿದರು.
ಮೂಡಿಗೆರೆ ತಾಲ್ಲೂಕಿನಲ್ಲಿ 18 ಪ್ರಕರಣ ಹಾಗೂ ತರೀಕೆರೆ ತಾಲ್ಲೂಕಿನಲ್ಲಿ 4 ಪ್ರಕಣಗಳು ದಾಖಲಾಗಿ ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಕಸನ ಸಂಸ್ಥೆ ನಿರ್ದೇಶಕ ವರ್ಗೀಸ್, ಹೃದಯರಾಜ್, ನವೀನ್, ಸಂತ್ರಸ್ತರಾದ ತಾಯಮ್ಮ, ಮೂರ್ತಿ ಭಾಗವಹಿಸಿದ್ದರು.
To prevent slavery media should publish slavery reports
Leave a comment