ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಅವರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಬೆಳಗ್ಗೆಯೇ ಗಾಯತ್ರಿ ಶಾಂತೇಗೌಡ ಅವರ ಮನೆ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಜೈಕಾರ ಹಾಕಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಬಳಿಕ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಾಮಮಾರ್ಗಕ್ಕೆ ಸುಪ್ರೀಂ ಕೋರ್ಟ್ ತಕ್ಕ ಪಾಠ ಕಲಿಸಿದೆ. ನಾಲ್ಕುವರೆ ವರ್ಷಗಳ ಬಳಿಕ ಗಾಯತ್ರಿ ಶಾಂತೇಗೌಡ ಅವರಿಗೆ ನ್ಯಾಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಅವರೇ ವಿಧಾನ ಪರಿಷತ್ ಸದಸ್ಯರಾಗಿ ಮುಂದುವರೆಯಲಿದ್ದಾರೆ ಎಂದು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎಲ್.ಮೂರ್ತಿ, ಕಳೆದ ವಿಧಾನ ಪರಿಷತ್ ಚುನಾವಣೆ ವೇಳೆ ಅಕ್ರಮವಾಗಿ ಮತ ಚಲಾವಣೆ ಮಾಡಿಸುವ ಮೂಲಕ ಬಿಜೆಪಿ ಜಯಗಳಿಸಿತ್ತು. ಅಂದು ಚುನಾವಣಾ ವ್ಯವಸ್ಥೆಯು ಬಿಜೆಪಿಗೆ ಸಹಕಾರ ನೀಡಿತ್ತು. ಇದರ ವಿರುದ್ಧ ಗಾಯತ್ರಿ ಶಾಂತೇಗೌಡ ಅವರು ನಾಲ್ಕೂವರೆ ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಕೊನೆಗೂ ಅವರಿಗೆ ನ್ಯಾಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಮ ಮಾರ್ಗದಲ್ಲಿ ಗೆದ್ದಿದ್ದ ಎಂ.ಕೆ.ಪ್ರಾಣೇಶ್ ಅವರು ನಾಲ್ಕುವರೆ ವರ್ಷಗಳ ಕಾಲ ಮಾಸಾಶನ ಪಡೆದಿದ್ದಾರೆ. ಜೊತೆಗೆ ಅನುದಾನ ಹಂಚಿಕೆಯನ್ನು ಮಾಡಿದ್ದಾರೆ. ಇದು ಜನರಿಗೆ ಮಾಡಿದ ದೊಡ್ಡ ಮೋಸ ಮಾತ್ರವಲ್ಲದೆ ಪ್ರಜಾಪ್ರಭುತ್ವದ ಅಣುಕಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಪ್ರಾಣೇಶ್ ಅವರ ಎಲ್ಲಾ ಅರ್ಜಿಗಳನ್ನು ರದ್ದು ಮಾಡಿರುವುದು ಸ್ವಾಗತಾರ್ಹ. ಇದು ನನಗೆ ಮಾತ್ರವಲ್ಲದೆ ನಮ್ಮ ಕಾರ್ಯಕರ್ತರಿಗೆ ಸಿಕ್ಕ ಜಯ. ನಾನು ಕೇವಲ ಆರು ಮತಗಳ ಅಂತರದಿಂದ ಸೋತಾಗ ಕಾರ್ಯಕರ್ತರು ಕಣ್ಣೀರು ಹಾಕಿದ್ದರು. ಆದರೆ ಇದೀಗ ನನಗೆ ಜನಸೇವೆ ಮಾಡಲು ಅವಕಾಶ ಸಿಕ್ಕಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ನನ್ನ ಈ ಪ್ರಕರಣ ರಾಜ್ಯದ ಇತಿಹಾಸದಲ್ಲಿಯೇ ದಾಖಲಾಗುವ ಪ್ರಕರಣವಾಗಿದೆ. ಹಿಂದೆ ಎಂದು ಈ ರೀತಿಯ ಪ್ರಕರಣಗಳು ನಡೆದಿರಲಿಲ್ಲ. ಬಿಜೆಪಿಯ ಕುತಂತ್ರಕ್ಕೆ ಕೊನೆಗೂ ತಕ್ಕ ಶಾಸ್ತಿಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಮುಂದೆ ಬರಲಿರುವ ಗ್ರಾಪಂ ಚುನಾವಣೆ ಗಳಿಗೆ ನಮಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ಹೀಗಾಗಿ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಗಾಯತ್ರಿ ಶಾಂತಗೌಡ ಅವರೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮುಂದೆ ಬಿಜೆಪಿ ನಾಯಕರ ವಾಮ ಮಾರ್ಗದ ರಾಜಕಾರಣ ನಡೆಯುವುದಿಲ್ಲ. ಇದುವರೆಗೆ ವಾಮ ಮಾರ್ಗದ ಮೂಲಕವೇ ಗೆದ್ದವರನ್ನು ಮನೆಗೆ ಕಳುಹಿಸುವ ಕೆಲಸ ಮಾಡಿದ್ದರು. ಬಿಜೆಪಿಯ ಪಾಪದ ಕೊಡ ತುಂಬಿದೆ. ಇನ್ನಾದರೂ ಸಿಬಿಐ, ಐಟಿ ಇಡಿ ಬಳಸಿಕೊಂಡು ಬೆದರಿಸುವುದನ್ನು ಬಿಡಬೇಕು ಎಂದು ತಾಕೀತು ಮಾಡಿದರು.
ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಿ. ಎಲ್.ವಿಜಯ್ ಕುಮಾರ್, ಮಾಜಿ ಸಿಡಿಎ ಅಧ್ಯಕ್ಷ ನಯಾಜ್, ನಗರಸಭೆ ಸದಸ್ಯರಿಗಳಾದ ಪರಮೇಶ್ ರಾಜ್ ಅರಸ್, ಶಾದಾಬ್ ಅಲಂಖಾನ್, ಮುನೀರ್, ಖಲಂದರ್, ಕಾಂಗ್ರೆಸ್ ಮುಖಂಡರುಗಳಾದ ಪ್ರವೀಣ್ ಬೆಟಗೆರೆ, ರವಿಶಂಕರ್, ಕಾವ್ಯ, ಸಂತೋಷ್, ಶಾಂತೇಗೌಡ, ತನೋಜ್ ನಾಯ್ಡು ಮತ್ತಿತರರಿದ್ದರು.
Celebrations by Congress workers
Leave a comment