ಚಿಕ್ಕಮಗಳೂರು: ಸರ್ಕಾರದ ಅನುದಾನದ ಕೊರತೆ ನಡುವೆ ಕೆಪಿಟಿಸಿಎಲ್ ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನ ಜಿಲ್ಲೆಯ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ವರವಾಗಿದೆ. ಅದರಲ್ಲೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಣ್ಣಾವಲಿಗೆ ನೆರವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಇಂಧನ ಸಚಿವರಾಗಿದ್ದು, ಕೆಪಿಟಿಸಿಎಲ್ನ ಸಿಎಸ್ಆರ್ ನಿಧಿ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕಟ್ಟಡ ಮತ್ತು ಅಗತ್ಯ ಉಪಕರಣ ಒದಗಿಸಿದೆ. ಮೂಲಕ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ 21 ಶಿಬಿರಗಳಿಗೆ ಈ ಅನುದಾನ ದೊರಕಿದ್ದು. ತಲಾ ₹3 ಲಕ್ಷ ವೆಚ್ಚದಲ್ಲಿ ಈ ಶಿಬಿರಗಳನ್ನು ಬಲಪಡಿಸಲಾಗುತ್ತಿದೆ.
ಬೆಂಕಿಯಿಂದ ಕಾಡು ರಕ್ಷಣೆ ಮಾಡಲು ಮೂರು ಥರ್ಮಲ್ ಡೋನ್ಗಳನ್ನು ಕೆಪಿಟಿಸಿಎಲ್ ಒದಗಿಸಿದೆ. ವನ್ಯಜೀವಿಗಳ ಚಲನ -ವಲನ ಹಾಗೂ ಹುಲಿ ಗಣತಿಗೆ ನೆರವಾಗಲು 100 ಕ್ಯಾಮೆರಾ ಟ್ರ್ಯಾಪ್ಗಳನ್ನು ನೀಡಿದೆ. ಸಿಬ್ಬಂದಿ ಗಸ್ತು ತಿರುಗಲು ಒಂದು ಯಾಂತ್ರೀಕೃತ ದೋಣಿ ಮತ್ತು ಮುತ್ತೊಡಿಯಲ್ಲಿರುವ ಸೀಗೇಖಾನ್ ವಿಶ್ರಾಂತಿ ಗೃಹ ನವೀಕರಣ, ಪರಿಸರ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಮಿನಿ ಬಸ್ ಹಾಗೂ ಮುತ್ತೊಡಿ-ಮಲ್ಲಂದೂರು ರಸ್ತೆ ದುರಸ್ತಿಗೆ ₹2.58 ಕೋಟಿ ನೆರವು ನೀಡಿದೆ.
ಆರೋಗ್ಯ ಜಾಗೃತಿ ಮೂಡಿಸಲು ನಿಗಮವು ₹24 ಲಕ್ಷ ಒದಗಿಸಿದೆ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ₹10 ಲಕ್ಷ ಅನುದಾನವನ್ನು ನೀಡಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ₹ 29. 43 ಲಕ್ಷ ವೆಚ್ಚದಲ್ಲಿ ಅಂಬ್ಯುಲೆನ್ಸ್ ಒದಗಿಸಿದೆ. ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುದಾನ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ವಾಹನ ನೀಡಿದೆ.
ಚಿಕ್ಕಮಗಳೂರಿನ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದ ನಿರ್ಮಾಣಕ್ಕೆ ₹2 ಕೋಟಿ ಹಾಗೂ ಜಿಲ್ಲಾ ರೈಫಲ್ಸ್ ಮತ್ತು ಶಾಟ್ಗನ್ ಅಸೋಸಿಯೇಷನ್ ಮೂಲಸೌಕರ್ಯ ಅಭಿವೃದ್ಧಿಗೆ ₹1 ಕೋಟಿಯನ್ನು ನಿಗಮ ಒದಗಿಸಿದೆ.
ಜಿಲ್ಲೆಯ ಸರ್ಕಾರಿ ಶಾಲೆಗಳ ಬಲವರ್ಧನೆಗೂ ಕೆಪಿಟಿಸಿಎಲ್ ನಿಧಿ ಬಳಕೆ ಮಾಡಲಾಗುತ್ತಿದೆ. ಸಿರಿವಾಸೆ ಸರ್ಕಾರಿ ವಿವೇಕಾನಂದ ಪ್ರಾಥಮಿಕ ಶಾಲೆಗೆ ಪ್ಯಾನಲ್ ಟಿವಿ, ಕಂಪ್ಯೂಟರ್ ಹಾಗೂ ಒಂದನೇ ತರಗತಿಯಿಂದ ಹತ್ತನೇ ತರಗತಿ ತನಕ ಶಿಕ್ಷಣಕ್ಕೆ ನೆರವಾಗಲು ಸಂಯೋಜಿತ ಪಠ್ಯವನ್ನು ಒದಗಿಸಿದೆ.
ಕೆಂಪನಹಳ್ಳಿಯ ಆಶಾಕಿರಣ ಅಂಧ ಮಕ್ಕಳ ಶಾಲೆಗೆ₹ 16 ಲಕ್ಷ ವೆಚ್ಚದಲ್ಲಿ ಉಪಕರಣ ಒದಗಿಸಲಾಗಿದೆ. ಬಾಳೆಹೊನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್, ಕಡೂರಿನ ನಿವೇದಿತಾ ಶ್ರವಣದೋಷ ಮಕ್ಕಳ ಶಾಲೆಗೆ ₹20 ಲಕ್ಷ ನೀಡಿದೆ. ಅತ್ತಿಗುಂಡಿ ಗ್ರಾಮದ ಸರ್ಕಾರಿ ಶಾಲೆ ದುರಸ್ತಿಗೆ ₹8.5 ಲಕ್ಷ ನೆರವು ಬಂದಿದೆ.
KPTCL CSR grant helps in protecting Bhadra Tiger Reserve
Leave a comment