ಚಿಕ್ಕಮಗಳೂರು: ವಾಹನಗಳ ಮಿರರ್ ಪರಸ್ಪರ ತಗುಲಿದ ಸಣ್ಣ ವಿಚಾರ ಕತ್ತಿ-ಬಂದೂಕು ಝಳಪಿಸುವ ಹಂತಕ್ಕೆ ತಲುಪಿರುವ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸರವಳ್ಳಿ ಗ್ರಾಮದಲ್ಲಿ ಜುಲೈ 2 ರಂದು ಬೆಳಗ್ಗೆ ಈ ಹೈಡ್ರಾಮಾ ನಡೆದಿದ್ದು, ಗ್ರಾಮದ ರವಿ ಬಿ.ಎಂ. ಹಾಗೂ ಗಿರೀಶ್ ಎಂಬುವವರ ನಡುವೆ ಕಾರುಗಳ ಸೈಡ್ ಮಿರರ್ ತಾಗಿದ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಮಗನನ್ನು ಬಸ್ಸಿಗೆ ಬಿಟ್ಟು ಕಾರಿನಲ್ಲಿ ವಾಪಸ್ ಬರುತ್ತಿದ್ದ ರವಿ ಅವರ ಕಾರಿಗೆ, ಎದುರುಗಡೆಯಿಂದ ಕಾರಿನಲ್ಲಿ ಬಂದ ಗಿರೀಶ್ ಮಿರರ್ ತಾಗಿಸಿದ್ದಾರೆ ಎನ್ನಲಾಗಿದೆ.
ಇದನ್ನು ರವಿ ಪ್ರಶ್ನಿಸಿದ್ದೇ ತಡ, ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಿರೀಶ್ ತನ್ನ ಕುಟುಂಬದವರನ್ನು ಕತ್ತಿ, ದೊಣ್ಣೆ ತರುವಂತೆ ಕೂಗಾಡಿದ್ದು, ಸ್ಥಳಕ್ಕೆ ಬಂದ ತಂದೆ ಶಂಕರೇಗೌಡ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಮತ್ತು ತಾಯಿ ಶಾರದಮ್ಮ ತಂದಿದ್ದ ಕತ್ತಿಯಿಂದ ಗಿರೀಶ್ ಕೊಲೆಗೆ ಯತ್ನಿಸಿದ್ದಾರೆ ಎಂದು ರವಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಗಿರೀಶ್ ಪತ್ನಿ ತೇಜಸ್ವಿನಿ ಕೂಡ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿರುವ ಗಿರೀಶ್ ಕೌಂಟರ್ ಕೇಸ್ ದಾಖಲಿಸಿದ್ದಾರೆ. ಜಮೀನಿನ ವಿಚಾರವಾಗಿ ರವಿ ಮತ್ತು ನಮ್ಮ ನಡುವೆ ಮೊದಲೇ ವೈಮನಸ್ಸಿತ್ತು ಎಂದು ಗಿರೀಶ್ ದೂರಿನಲ್ಲಿ ತಿಳಿಸಿದ್ದಾರೆ. ತಾವು ಮಕ್ಕಳನ್ನು ಶಾಲಾ ಬಸ್ಸಿಗೆ ಬಿಡಲು ಕಾರಿನಲ್ಲಿ ಹೋಗುತ್ತಿದ್ದಾಗ ರವಿ ತಮಗೆ ಅಪಘಾತ ಮಾಡುವಂತೆ ಕಾರು ಚಲಾಯಿಸಿ ಮಿರರ್ ತಾಗಿಸಿದ್ದಲ್ಲದೆ, ಕಾರಿನಿಂದ ಇಳಿದು ಬಂದು ತಮ್ಮ ಎಡಭುಜ ಹಾಗೂ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಗಲಾಟೆ ಬಿಡಿಸಲು ಬಂದ ತನ್ನ ತಂದೆ ಹಾಗೂ ಪತ್ನಿ ಮೇಲೂ ರವಿ ಹಲ್ಲೆ ನಡೆಸಿದ್ದಾರೆ ಎಂದು ಗಿರೀಶ್ ದೂರಿದ್ದಾರೆ.
ಅಷ್ಟೇ ಅಲ್ಲದೆ, ರವಿ ತನ್ನ ಕಾರಿನಲ್ಲಿದ್ದ ಬಂದೂಕನ್ನು ತಮಗೆ ತೋರಿಸಿ, ಜಮೀನು ವಿಚಾರಕ್ಕೆ ಬಂದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗಿರೀಶ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸದ್ಯ ಆಲ್ಲೂರು ಪೊಲೀಸರು ಎರಡು ಕಡೆಯ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೆ.ಗೊಂಡಿದ್ದಾರೆ.
A brawl broke out with mirrors of vehicles hitting each other swords and guns brandishing.
Leave a comment