ಚಿಕ್ಕಮಗಳೂರು: ಇತ್ತೀಚೆಗೆ ಡಿ. ರಾಮೇಗೌಡರವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷನಾಗಿ ನೇಮಕ ಮಾಡಿರುವುದು ನಿಯಮ ಬಾಹಿರವಾಗಿದ್ದು, ಈ ಆಯ್ಕೆ ಅಮಾನ್ಯ ಎಂದು ಜಿಲ್ಲಾಧ್ಯಕ್ಷ ಮಹೇಶ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ಶಾಖೆಗೆ ನೂತನವಾಗಿ ಡಿ.ರಾಮೇಗೌಡರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಾಗಿ ಕೆಲವರು ಪತ್ರಿಕಾ ಗೋಷ್ಠಿ ನಡೆಸಿರುವುದು ನಿಯಮ ಬಾಹಿರವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ ಎಂದರು.
ತಾಲ್ಲೂಕು ಅಧ್ಯಕ್ಷರಾಗಿದ್ದ ವೈ.ಸಿ.ಸುನಿಲ್ ಕುಮಾರ್ ರವರ ಮೇಲೆ ಕೆಲವು ಆರೋಪಗಳಿದ್ದು, ಆರೋಪಗಳ ಬಗ್ಗೆ ಸ್ಪಷ್ಟಿಕರಣ ಕೇಳಲು ಜಿಲ್ಲಾ ಸಮಿತಿ ಸಭೆ ತೀರ್ಮಾನಿಸಿತ್ತು. ಅದರಂತೆ ಜಿಲ್ಲಾ ಸಮಿತಿ ಸುನಿಲ್ ಕುಮಾರ್ ರವರಿಗೆ ರಿಜಿಸ್ಟರ್ ಅಂಚೆ ಪತ್ರದ ಮೂಲಕ ನೋಟಿಸು ಜಾರಿ ಮಾಡಲಾಗಿತ್ತು. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಸುನಿಲ್ ಕುಮಾರ್ ಅನಾರೋಗ್ಯದ ಕಾರಣ ನೀಡಿ ರಾಜಿನಾಮೆ ನಾಟಕ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಕೆ.ಕೆ.ಕೃಷ್ಣಗೌಡರು ಸಂಘಟನೆಯಲ್ಲಿ ಬಹಳ ಕಾಲ ಇರುವವರು ಸಂಘಟನೆಯ ನಿಯಮಾವಳಿಗಳು ಕೃಷ್ಣಗೌಡರಿಗೆ ತಿಳಿದಿದ್ದರೂ ಯಾರೊ ಬೆರಳೆಣಿಕೆ ಜನರನ್ನು ಕೂರಿಸಿಕೊಂಡು ಅಸ್ಥಿತ್ವದಲ್ಲಿರುವ ತಾಲ್ಲೂಕು ಸಮಿತಿ ಗಮನಕ್ಕೂ ಬಾರದೆ ತಾಲ್ಲೂಕು ಸಮಿತಿ ಅಧ್ಯಕ್ಷರನ್ನು ಘೋಷಣೆ ಮಾಡಿರುವುದು ನಿಯಮ ಬಾಹಿರವಾಗಿದೆ ಎಂದು ಹೇಳಿದರು.
ಈ ವಿಚಾರವನ್ನು ರಾಜ್ಯ ಸಮಿತಿ ಗಮನಕ್ಕೆ ತರಲಾಗಿದ್ದು ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲವೆಂದು ರಾಜ್ಯಾಧ್ಯಕ್ಷರು ತಿಳಿಸಿರುತ್ತಾರೆ. ಈ ಕಾರಣದಿಂದ ಕೂಡಲೆ ಜಾರಿಗೆ ಬರುವಂತೆ ಸಂಪೂರ್ಣ ತಾಲ್ಲೂಕು ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಹಾಗೂ ಮತ್ತಾವರ ಜಯರಾಂರವರನ್ನು ತಾಲ್ಲೂಕು ಸಂಚಾಲಕರಾಗಿ ನೇಮಕ ಮಾಡಿದ್ದು ಮುಂದಿನ ತಾಲ್ಲೂಕು ಸಮಿತಿ ಸಭೆ ಕರೆಯುವ ಜವಬ್ದಾರಿಯನ್ನು ನೀಡಲಾಗಿದೆ ಅಲ್ಲಿ ತಾಲ್ಲೂಕು ಸಮಿತಿ ರಚನೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷ ಬಿ.ಸಿ. ಬಸವರಾಜು, ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಾಶೇಖರ್, ದೇವರಾಜ್, ಶಿವಣ್ಣ, ಜಯರಾಂ, ಕುಮಾರಸ್ವಾಮಿ ಇದ್ದರು.
Appointment of president of taluk unit of farmers’ association is illegal
Leave a comment