ಚಿಕ್ಕಮಗಳೂರು: ತ್ಯಾಗ, ಬಲಿದಾನ ಹಾಗೂ ಭ್ರಾತೃತ್ವದ ಸಂಕೇತವಾದ ಈದುಲ್ ಅಝಾಹ್(ಬಕ್ರೀದ್) ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಗುರುವಾರ ಆಚರಿಸಲಾಯಿತು.
ಕಳೆದ ಒಂದು ವಾರದಿಂದಲೇ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿತ್ತು. ಗುರುವಾರ ಬೆಳಿಗ್ಗೆ ಬಿಳಿ ಬಟ್ಟೆ ತೊಟ್ಟು ಮಸೀದಿ, ಈದ್ಗಾ ಮೈದಾನಗಳಿಗೆ ತಂಡೋಪ ತಂಡವಾಗಿ ಬಂದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲ್ವಿಗಳು ಸಂದೇಶ ಮತ್ತು ಪ್ರವಚನ ನೀಡಿದರು.
ಪ್ರಾರ್ಥನೆ ಮುಗಿಸಿದ ನಂತರ ಕಬರಸ್ತಾನಕ್ಕೆ ತೆರಳಿ, ಗೋರಿಗಳಿಗೆ ಹೂ ಸಮರ್ಪಿಸಿ ಹಿರಿಯರನ್ನು ಸ್ಮರಿಸಿದರು. ಪ್ರಾರ್ಥನೆ ಮುಗಿಸಿದ ಬಳಿಕ ಪರಸ್ಪರ ಅಲಂಗಿಸಿ ಶುಭಾಶಯ ಹಂಚಿಕೊಂಡರು.
ಬಡವರು, ನೆರೆ ಹೊರೆಯವರು, ಸಂಬಂಧಿಕರಿಗೆ ಕುರಬಾನಿ ಹಂಚುವುದು ಈ ಹಬ್ಬದ ವಿಶೇಷ. ಬಿರಿಯಾನಿ, ಪಾಯಸ, ಜಾಮೂನು, ಹಣ್ಣುಗಳಿಂದ ತಯಾರಿಸಿದ ಕಸ್ಟರ್ಡ್, ಶಾವಿಗೆ ಸೇರಿ ಬಗೆ ಬಗೆಯ ಖಾದ್ಯ ಸಿದ್ಧಪಡಿಸಿಕೊಂಡು ಸವಿಯುವುದು ಎಲ್ಲರ ಮನೆಯಲ್ಲೂ ಸಾಮಾನ್ಯ. ಇದೇ ರೀತಿ ಈ ವರ್ಷವೂ ಎಲ್ಲರ ಮನೆಯಲ್ಲೂ ಸಂಭ್ರಮದಿಂದ ಹಬ್ಬ ಅಚರಿಸಲಾಯಿತು.
ಮಸೀದಿ ರಸ್ತೆಗಳಲ್ಲಿ ವಾಹನ, ಜನ ದಟ್ಟಣೆ ಇತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
Bakrid celebrated with devotion across the district
Leave a comment