ಚಿಕ್ಕಮಗಳೂರು: ನಗರದ 60 ಅಡಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಲಾರಿಗೆ ಪಂಚರ್ ಹಾಕುತ್ತಿದ್ದ ಗ್ಯಾರೇಜ್ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೊಹಮ್ಮದ್ ಹಿಮರೂಜ್ (47) ಎಂಬುವರೇ ದುರ್ಮರಣಕ್ಕೀಡಾದ ದುರದೃಷ್ಟಕರ ವ್ಯಕ್ತಿ. ಹಿಮರೂಜ್ ಅವರು ಎಂದಿನಂತೆ ತಮ್ಮ ಪಂಚರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಗ್ಯಾರೇಜ್ಗೆ ಬಂದ ಭಾರತ್ ಬೆಂಜ್ ಲಾರಿಯೊಂದಕ್ಕೆ ಅವರು ಪಂಚರ್ ಹಾಕುತ್ತಾ ನಿಂತಿದ್ದರು.
ಇದೇ ಸಮಯದಲ್ಲಿ ಮಹೀಂದ್ರಾ ಪಿಕ್ಅಪ್ (KA 15 7330) ವಾಹನದ ಚಾಲಕ ನಯಾಜ್ ಎಂಬಾತ ತನ್ನ ವಾಹನವನ್ನು ತೀವ್ರ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ರಿವರ್ಸ್ ತೆಗೆದಿದ್ದಾನೆ. ಪರಿಣಾಮ, ಲಾರಿಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಹಿಮರೂಜ್ ಅವರಿಗೆ ಪಿಕ್ಅಪ್ ವಾಹನವು ಜೋರಾಗಿ ಡಿಕ್ಕಿ ಹೊಡೆದು, ಅವರ ಮೇಲೆಯೇ ಹರಿದಿದೆ.
ಅಪಘಾತದಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಹಿಮರೂಜ್ ಅವರನ್ನು ತಕ್ಷಣವೇ ಅಲ್ಲಿದ್ದ ಲಾರಿ ಚಾಲಕ ಹಾಗೂ ಸ್ಥಳೀಯ ಸಾರ್ವಜನಿಕರು ಆಟೋ ಒಂದರಲ್ಲಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಹಿಮರೂಜ್ ಕೊನೆಯುಸಿರೆಳೆದಿದ್ದು, ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ದುರ್ಘಟನೆಗೆ ಕಾರಣವಾದ ಪಿಕ್ಅಪ್ ವಾಹನ ಹಾಗೂ ಅದರ ಬೇಜವಾಬ್ದಾರಿ ಚಾಲಕ ನಯಾಜ್ ವಿರುದ್ಧ ಮೃತರ ಪತ್ನಿ ಶಾಬಿನಾ ನಾಜ್ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Worker who was fixing a lorry puncture dies on the spot
Leave a comment