ಚಿಕ್ಕಮಗಳೂರು: ಆಟವಾಡುವ ಸಮಯದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರಿಶಿನ ಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಬಿಸಿಲಿನ ಝಳಕ್ಕೆ ಕಾರಂಜಿ ಕೆರೆ ಖಾಲಿಯಾಗಿ ಮಧ್ಯ ಭಾಗದಲ್ಲಿ ಮಾತ್ರ ಸ್ವಲ್ಪವೇ ನೀರು ಉಳಿದಿತ್ತು. ಈ ಕೆರೆ ಪಾತ್ರದಲ್ಲಿ ಮಕ್ಕಳು ಆಟವಾಡುತ್ತಿರುವಾಗ ನಾಲ್ಕು ವರ್ಷದ ಬಾಲಕಿ ನೀರಿಗೆ ಬಿದ್ದಿದ್ದಾಳೆ. ಈ ಬಾಲಕಿಯನ್ನು ರಕ್ಷಿಸಲು ಹೋದ ನಾಲ್ಕು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅರಳುಗುಪ್ಪೆ ಗ್ರಾಮದ ಮೈದಿಹಾ(9), ಅಬ್ದುಲ್ ರೆಹಮಾನ್(13), ನಾಯಜ್(10), ಕೈಮರ ಗ್ರಾಮದ ಅರಮಾನ್ ಮೃತಪಟ್ಟ ಮಕ್ಕಳು. ನಾಲ್ಕು ವರ್ಷದ ಮಗು ಅರ್ಮನ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ತಾವು ಆಟವಾಡುತ್ತಿರುವಾಗ ತಮ್ಮೊಂದಿಗಿದ್ದ ಬಾತುಕೋಳಿ ನೀರಿಗಿಳಿದಿದ್ದು ಅದನ್ನು ಹಿಡಿಯಲು ಹೋದ ವೇಳೆ ಮಕ್ಕಳು ಒಬ್ಬರ ಹಿಂದೊಬ್ಬರಂತೆ ನೀರಿಗಿಳಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಮ್ಮಯ್ಯ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಡಿ.ತಮ್ಮಯ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ವಿಚಾರಿಸಿದರಲ್ಲದೆ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಇಂಥ ಘಟನೆಗಳು ನಡೆಯಬಾರದು. ಮೃತ ಮಕ್ಕಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ಪರಿಹಾರ ನೀಡಬಹುದು ಆದರೆ ಮಕ್ಕಳನ್ನು ಮರಳಿ ಕೊಡಲು ಸಾಧ್ಯವಿಲ್ಲ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದರು.
ಕೆರೆಗಳ ಬಳಿ ಯಾವ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಈ ರೀತಿಯ ಹಲವು ಕೆರೆಗಳಿವೆ. ಮಕ್ಕಳ ಸುರಕ್ಷತೆಗೆ ಇಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.
ನಾಲ್ಕು ವರ್ಷದ ಓರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಮಗುವಿಗೆ ಯಾವುದೇ ಅಪಾಯವಾಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
Four children drowned in water
Leave a comment