ಚಿಕ್ಕಮಗಳೂರು: ತುಂಗಭದ್ರಾ ಎಡದಂಡೆ ಭಾಗದ ರೈತರಿಗೆ ನೀರು ಹರಿಸಬೇಕು ಎಂದು ಹೋರಾಟ ನಡೆಸಿದ ರೈತ ಮುಖಂಡರ ಮೇಲೆ ಹಾಕಿರುವ ಪೊಲೀಸ್ ಕೇಸುಗಳನ್ನು ಸರಕಾರ ವಾಪಸ್ಸು ಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸರೋಜಬಸವರಾಜು ಎಚ್ಚರಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಂಗಾಭದ್ರಾ ಎಡದಂಡೆ ಭಾಗದ ರೈತರಿಗೆ ಬೇಸಿಗೆ ಬೆಳಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ನಮ್ಮ ಸಂಘದ ರಾಜ್ಯಾಧ್ಯಕ್ಷ ಶರಣೇಗೌಡ ಕೆಸರಟ್ಟಿ, ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಅಲ್ಲಿನ ಜಿಲ್ಲಾ ಸಚಿವ ಶಿವರಾಜ್ ತಂಗಡಗಿ ಅವರ ಕುಮ್ಮಕ್ಕಿನಿಂದ ನಮ್ಮ ಮುಖಂಡರನ್ನು ಬಂಧಿಸಿ ಸುಳ್ಳು ಕೇಸು ದಾಖಲಿಸಲಾಗಿದೆ. ರೈತ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಅವರ ಮೇಲೆ ನಿರಂತರವಾಗಿ ಕೇಸು ದಾಖಲಿಸಲಾಗಿದೆ ಎಂದು ದೂರಿದರು.
ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇವೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಮುಖ್ಯಮಂತ್ರಿ ಆಗ್ರಹಿಸಿದ್ದೇವೆ ಎಂದರು.
ರೈತ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸಿರುವ ಕಾರಟಗಿ ಪೊಲೀಸ್ ಅಧಿಕಾರಿ ಸುಧೀರ್ ಬೆಂಕಿ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದನೆ ದೊರೆಯದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲು ನಿರ್ಧರಿಸಲಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಪ್ರೇಮ, ರೈತ ಮುಖಂಡರಾದ ಮರೀಗೌಡ, ವಿಶ್ವನಾಥ, ಸುಖಿತ್, ಮತ್ತಿತರರಿದ್ದರು.
Statewide protest if case against farmers not withdrawn
Leave a comment