ಕೊಪ್ಪ: ತಾಲ್ಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಇಸ್ಪೀಟು ಜೂಜಾಟದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಂಡಿಗಡಿ ಗ್ರಾಮದ ಶಕಟಾಪುರ ಮಠದ ರಸ್ತೆಯ ಅಕೇಶಿಯಾ ಪ್ಲಾಂಟೇಷನ್ ಬಳಿಯ ಸರ್ಕಾರಿ ಕಾಡಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಹರಿಹರಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ನಾಯ್ಕ ಮತ್ತು ಸಿಬ್ಬಂದಿ ಪಂಚರ ಸಮಕ್ಷಮ ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಂಡಿಗಡಿ ಮತ್ತು ಸುತ್ತಮುತ್ತಲ ಗ್ರಾಮಗಳ ನಿವಾಸಿಗಳಾದ ಅರುಣ ಹೆಚ್.ಎ (34), ಶಿವರಾಮ್ ಬಿ.ಟಿ (41), ಸೂಚನ್ ಎ.ಎಸ್ (32), ಸಚಿನ್ ಎ.ಎಸ್ (34), ರಮೇಶ್ ಹೆಗ್ಡೆ (33), ರಾಘವೇಂದ್ರ (46), ರಾಘವೇಂದ್ರ ಎಎನ್ (42), ಅರುಣ (33) ಮತ್ತು ಪ್ರಸನ್ನ ಎ.ವೈ (42) ಎಂಬ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಬಂಧಿತರಿಂದ ಪೊಲೀಸರು 52 ಇಸ್ಪೀಟ್ ಎಲೆಗಳು, 3,930 ರೂಪಾಯಿ ನಗದು ಹಣ, ಪ್ಲಾಸ್ಟಿಕ್ ಚೀಲ ಹಾಗೂ ಕ್ಯಾಂಡಲ್ ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಆರೋಪಿಗಳ ವಿರುದ್ಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Illegal card gambling – 9 people arrested
Leave a comment