ಚಿಕ್ಕಮಗಳೂರು: ಜಿಲ್ಲೆಯ ಲಿಂಗಾಯತ ಸಮುದಾಯವನ್ನು ತುಳಿಯುವ ಕೆಲಸವನ್ನು ಬಿಜೆಪಿಯ ಹಿರಿಯ ಮುಖಂಡ ಸಿ.ಟಿ.ರವಿ ಮಾಡುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿಯ ಉಚ್ಚಾಟಿತ ಮುಖಂಡ ಎಂ.ಎಸ್.ನಿರಂಜನ್ ಆರೋಪಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗದಿದ್ದರೂ ಅವೈಜ್ಞಾನಿಕವಾಗಿ ಬಿಜೆಪಿ ಪಕ್ಷದಿಂದ ನನ್ನನ್ನು ಉಚ್ಛಾಟಿಸಿದ್ದಾರೆ. ಈ ಬಗ್ಗೆ ಪಕ್ಷದ ರಾಜ್ಯದ ಹಿರಿಯ ಮುಖಂಡರಿಗೆ ದೂರು ಸಲ್ಲಿಸುತ್ತೇನೆ. ಜತೆಗೆ ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಕೇಳುತ್ತೇನೆ ಎಂದರು.
೧೯೯೮ರಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಹಲವು ಅವಕಾಶವನ್ನು ಕೈ ಬಿಟ್ಟಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಬಿಜೆಪಿಯಲ್ಲಿ ವ್ಯಕ್ತಿಯೇ ಮುಖ್ಯವಾಗಿದ್ದು, ಜಿಲ್ಲಾ ಕೋರ್ ಕಮಿಟಿಯು ಹಲ್ಲು ಕಿತ್ತ ಹಾವಾಗಿದೆ. ಬಿಜೆಪಿಯ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅವರಿಗೆ ಅರ್ಹತೆ ಇಲ್ಲದಿದ್ದರೂ ಅವರಿಗೆ ಪ್ರೋತ್ಸಾಹ ನೀಡಿ ಜಿಲ್ಲಾಧ್ಯಕ್ಷರಾಗಿ ಮಾಡಲಾಗಿತ್ತು. ಆದರೂ ತಮ್ಮನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರ ಏಕೆ ಮಾಡಿದರು ಎಂಬುದು ಅರ್ಥವಾಗಿಲ್ಲ ಎಂದು ಹೇಳಿದರು.
ಸಿ.ಟಿ.ರವಿ ಅವರು ಜಿಲ್ಲೆಯಲ್ಲಿ ಲಿಂಗಾಯತರು, ಕುರುಬರು, ಒಕ್ಕಲಿಗರು ಸೇರಿದಂತೆ ಯಾವುದೇ ಸಮುದಾಯದ ಮುಖಂಡರನ್ನು ಬೆಳೆಯುವುದಕ್ಕೆ ಬಿಡುತ್ತಿಲ್ಲ. ಅವರನ್ನು ಪ್ರಶ್ನೆ ಮಾಡಿದೆ ಎನ್ನುವ ಕಾರಣಕ್ಕೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಹಿಂದೆ ಸಹ ಹಲವು ಬಿಜೆಪಿಯ ನಿಷ್ಠಾವಂತ ಮುಖಂಡರನ್ನು ಇದೇ ರೀತಿ ಉಚ್ಛಾಟನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಿಂದ ಈವರೆಗೆ ಯಾವುದೇ ಅನ್ಯಾಯವಾಗಿಲ್ಲ. ಆದರೆ, ಸಿ.ಟಿ.ರವಿ ಅವರಿಂದ ನಾಲ್ಕೈ ದು ಬಾರಿ ದ್ರೋಹ ಆಗಿದೆ. ದ್ರೋಹ ನನಗೆ ಮಾತ್ರವಲ್ಲ. ಜಿಲ್ಲಾ ಬಿಜೆಪಿಯಲ್ಲಿರುವ ಬಹುತೇಕ ಮುಖಂಡರಿಗೆ ಇದೇ ಆಗುತ್ತಿದೆ. ಅವರು ಒಂದು ದಿನ ನನ್ನಂತೆಯೇ ಸಿಡಿಯುತ್ತಾರೆ ಎಂದು ಹೇಳಿದರು.
ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ದಾರೆ ಎಂದಾಕ್ಷಣ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ರಾಜಕಾರಣ ಮಾಡುತ್ತೇನೆ. ಹಾಗೆಂದು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
೨೦೦೪ರಲ್ಲಿ ಮೊದಲ ಬಾರಿ ಸಿ.ಟಿ,ರವಿ ಸ್ಪರ್ಧೆ ಮಾಡಿದಾಗಿನಿಂದ ಕಳೆದ ಚುನಾವಣೆಯಲ್ಲಿ ಸೋತಾಗ ಮತ್ತು ಗೆದ್ದಾಗ ಸಿ.ಟಿ.ರವಿ ಜೊತೆಗೆ ನಿಲ್ಲುವ ಕೆಲಸ ಮಾಡಿದ್ದೇನೆ. ಅವರ ನೆಡೆ, ನುಡಿಯಿಂದ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಅವರ ಸೋಲಿಗೆ ಪಕ್ಷ ಹಾಗೂ ಪಕ್ಷದ ಕಾರ್ಯಕಾರ್ಯಕತರು ಕಾರಣವಲ್ಲ ಎಂದು ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಮುದಾಯದ ಮುಖಂಡರಾದ ರಾಜಣ್ಣ, ರಮೇಶ್, ದರ್ಶನ್, ಶಿವಾನಂದ್, ರಾಕೇಶ್, ರಘುನಂದನ್, ಉಮೇಶ್ ಮತ್ತಿತರರಿದ್ದರು
C.T. Ravi is oppressing Lingayats in the district.
Leave a comment