ಚಿಕ್ಕಮಗಳೂರು: ಜಮೀನಿಗೆ ಕಲ್ಲು ಕಟ್ಟುವ ಕೂಲಿ ಕೆಲಸದ ಹಣದ ಹಂಚಿಕೆಯಲ್ಲಿ ಉಂಟಾದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ನಗರದ ೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
೨೦೨೦ರ ಜೂನ್ ೯ ರಂದು ಹಳೇ ಲಕ್ಕವಳ್ಳಿಯ ರಾಮಯ್ಯ ಎಂಬಾತ ಜೊತೆಗೆ ಕೆಲಸ ಮಾಡುತ್ತಿದ್ದ ಪೆಂಚಾಲಯ್ಯ ಎಂಬಾತನಿಗೆ ಹಣದ ಹಂಚಿಕೆ ಮಾಡುವ ಸಂದರ್ಭ ಪ್ರಾಮಾಣಿಕವಾಗಿ ಹಣ ನೀಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಪೆಂಚಾಲಯ್ಯ ರಾಮಯ್ಯ ಅವರನ್ನು ಮಚ್ಚಿನಿಂದ ಹೊಡೆದು ಹಳ್ಳಕ್ಕೆ ತಳ್ಳಿ ಕೊಲೆ ಮಾಡಿದ್ದ.
ಕೃತ್ಯದ ಬಳಿಕ ಕಲ್ಲು ಬಿದ್ದು ರಾಮಯ್ಯ ಗಾಯಗೊಂಡಿದ್ದಾಗಿ ಸುಳ್ಳು ಕಥೆ ಸೃಷ್ಟಿಸಿದ್ದ. ಈ ಕುರಿತು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತರೀಕೆರೆ ಪೊಲೀಸ್ ವೃತ್ತ ನಿರೀಕ್ಷಕ ಕೆ.ಎ.ಯೋಗೀಶ್ ಪ್ರಕರಣದ ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಸಂದರ್ಭ ಸೂಕ್ತ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ನಗರದ ೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ(ಪ್ರಭಾರ)ರಾದ ವಿ.ಪ್ರಕಾಶ್ ಅವರು ಆರೋಪಿ ಪೆಂಚಾಲಯ್ಯನಿಗೆ ಭಾರತೀಯ ದಂಡ ಸಂಹಿತೆ ಕಲಂ ೩೦೨ ಐಪಿಸಿ ಅನ್ವಯ ಜೀವಾವಧಿ ಶಿಕ್ಷೆ ಹಾಗೂ ೧೦ ಸಾವಿರ ರೂ. ದಂಡ ವಿಧಿಸಿದ್ದು,
ದಂಡ ಪಾವತಿಸಲು ತಪ್ಪಿದಲ್ಲಿ ೧ ವರ್ಷದ ಕಠಿಣ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಅಲ್ಲದೆ, ಕಲಂ ೨೦೧ ಐಪಿಸಿ ಅನ್ವಯ ೭ ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ೧೦ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ನೀಡಿ ಸೋಮವಾರ ತೀರ್ಪಿತ್ತಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಭಾವನ ಅವರು ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಿಪಿಸಿ ಎಂ.ಬಿ.ಶಂಕರಪ್ಪ ಅವರು ತನಿಖಾ ಸಹಾಯಕರಾಗಿ ಹಾಗೂ ಸಿಹೆಚ್ಸಿ ಕೆ.ಆರ್.ಶಿವಕುಮಾರ್ ಅವರು ನ್ಯಾಯಾಲಯದ ಕರ್ತವ್ಯ ಮತ್ತು ಪ್ರೋಸೆಸ್ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅಧಿಕಾರಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
Murder accused gets life sentence
Leave a comment