ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಜ್ಞಾನ, ಕ್ರಿಯಾಶೀಲತೆ, ವ್ಯವಹಾರದ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಮಾರ್ಕೆಟ್ ಮೇಳ ಆಯೋಜನೆ ಮಾಡಿರುವುದು ಸಹಕಾರಿಯಾಗಲಿದೆ ಎಂದು ಪ್ರಾಂಶುಪಾಲ ಡಾ. ಮೂಡಲಗಿರಿಯಪ್ಪ ತಿಳಿಸಿದರು.
ಅವರು ಇಂದು ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಒಟ್ಟಾಗಿ ಸೇರಿ ಆಯೋಜಿಸಲಾಗಿದ್ದ ಮಾರ್ಕೆಟ್ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಬದುಕು, ಚಟುವಟಿಕೆಗಳನ್ನು ಅರ್ಥಮಾಡಿಸಲು ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಸ್ವ-ಉದ್ಯೋಗ ಸ್ಥಾಪಿಸಿ ವ್ಯಾಪಾರ ವಹಿವಾಟು ನಡೆಸಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಮಾರ್ಕೆಟ್ ಮೇಳ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳನ್ನು ವ್ಯಾವಹಾರಿಕ ಬದುಕಿನ ಬಗ್ಗೆ ಹುರಿದುಂಬಿಸಲು ಈ ಮಾರ್ಕೆಟ್ ಮೇಳ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಉಪನ್ಯಾಸಕ ನಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರಗಳ ಕುರಿತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷ ರಿಟೇಲ್ ಗಲಾ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು. ಸುಮಾರು ವಿವಿಧ ರೀತಿಯ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ೧೩ ಮಳಿಗೆಗಳನ್ನು ನಿರ್ಮಿಸಲಾಗಿದೆ. ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಭಾಗವಹಿಸಿದ್ದು, ವಿಶೇಷವಾಗಿ ಈ ಮಾರ್ಕೆಟ್ ಮೇಳದಲ್ಲಿ ಮನೆಯಲ್ಲಿ ಬೆಳೆದ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡಲಾಗಿದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸುವ ಕಾರಣದಿಂದ ಈ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.
ವಿದ್ಯಾರ್ಥಿನಿ ಸ್ವಾತಿ ಮಾತನಾಡಿ, ನಮಗೆ ರಿಟೇಲ್ ಮ್ಯಾನೇಜ್ಮೆಂಟ್ ಎಂಬ ವಿಷಯವಿದ್ದು, ಅದಕ್ಕೆ ಪೂರಕವಾಗಿ ಇಂದು ಮಾರ್ಕೆಟ್ ಮೇಳದ ಮೂಲಕ ಆಚರಣೆ ಮಾಡುತ್ತಿದ್ದೇವೆ. ಇಲ್ಲಿ ಅಹಾರ ಪದಾರ್ಥ, ತರಕಾರಿ, ಮನೆಯಲ್ಲಿ ಕೈಯಿಂದ ತಯಾರಿಸಿದ ವಸ್ತುಗಳು ಮಾರಾಟಕ್ಕೆ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಇದರಿಂದ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ದೀಕ್ಷಿತ್ ಕುಮಾರ್, ಪ್ರಾದ್ಯಾಪಕರಾದ ಲೋಕೇಗೌಡ, ಪೃಥ್ವಿ, ಹೇಮಮಾಲಿನಿ ಇತರರು ಉಪಸ್ಥಿತರಿದ್ದರು.
Market fair helps raise awareness about business
Leave a comment