ಕಡೂರು: ‘ತರಬೇತಿ ಹೊಂದಿ ಜವಾಬ್ದಾರಿ ನಿರ್ವಹಿಸಲು ಮುಂದಾಗುತ್ತಿರುವ ಪೊಲೀಸ್ ಪ್ರಶಿಕ್ಷಣಾರ್ಥಿಗಳು ವೃತ್ತಿಯನ್ನು ಗೌರವಿಸುವುದರ ಜೊತೆಗೆ ಆರೋಗ್ಯ ಮತ್ತು ಕುಟುಂಬದ ಕಡೆಗೂ ಲಕ್ಷ್ಯ ಕೊಡಬೇಕು’ ಎಂದು ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸಲಹೆ ನೀಡಿದರು.
ಕಡೂರು ಹೊರವಲಯದ ಗೆದ್ಲೆಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಬುಧವಾರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ವೀಕ್ಷಿಸಿ, ಅತ್ಯುತ್ತಮ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ಸಮಸ್ಯೆ ಇಲ್ಲದ ಜನರಿಲ್ಲ, ತರಬೇತಿ ಸಂದರ್ಭದಲ್ಲಿ ಕಲಿತ ವೃತ್ತಿಪರ ವಿಧಾನಗಳನ್ನು ಅನುಸರಿಸಿ ಸವಾಲುಗಳನ್ನು ಎದುರಿಸಬೇಕು. ಸೇವೆಯ ನಡುವೆಯೂ ಯೋಗ, ವ್ಯಾಯಾಮಕ್ಕೆ ಕನಿಷ್ಠ 45 ನಿಮಿಷ ಮೀಸಲಿಟ್ಟು ಮಾನಸಿಕ ಮತ್ತು ದೈಹಿಕ ಆರೋಗ್ಯದ ರಕ್ಷಣೆಗೆ ಒತ್ತು ಕೊಡಬೇಕು. ಅಪರಾಧ ಕೃತ್ಯಕ್ಕೆ ಸಹಕರಿಸುವುದಿಲ್ಲ, ಸಮಾಜಕ್ಕೆ ಮಾದರಿಯಾಗಿ ಬದುಕುತ್ತೇವೆ ಎನ್ನುವ ಪ್ರತಿಜ್ಞೆಗಳನ್ನೂ ಮಾಡಿರಿ. ನೀವು ಸದೃಢರಾಗಿದ್ದರೆ ಸಮಾಜಕ್ಕೆ ಒಳಿತು ಮಾಡಲು ಸಾಧ್ಯ ಎನ್ನುವ ಎಚ್ಚರವಿರಲಿ’ ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಉತ್ತರ ವಿಭಾಗದ ಪೈಪ್ಬ್ಯಾಂಡ್ ನೇತೃತ್ವದಲ್ಲಿ ರಾಷ್ಟ್ರಧ್ವಜ ಮತ್ತು ಪೊಲೀಸ್ ಧ್ವಜಕ್ಕೆ ಗೌರವವಂದನೆ ಸಲ್ಲಿಸಲಾಯಿತು. ತರಬೇತಿ ಕೇಂದ್ರದ ಡಿವೈಎಸ್ಪಿ ಮಲ್ಲಿಕಾರ್ಜುನ ಎಸ್. ಮರೋಳ ಮತ್ತು ಕಾರ್ಗಿಲ್ ವೀರ ವಿಠಲ್ ಶಿಂಧೆ ಅವರ ನೇತೃತ್ವದಲ್ಲಿ 488 ಪ್ರಶಿಕ್ಷಣಾರ್ಥಿಗಳು ಧ್ವಜ ಮತ್ತು ಅತಿಥಿಗಳಿಗೆ ಪರೇಡ್ ಮೂಲಕ ವಂದನೆ ಸಲ್ಲಿಸಿದರು. ಕೇಂದ್ರದ ಅಧೀಕ್ಷಕ ಪಿ. ಪಾಪಣ್ಣ ಪ್ರತಿಜ್ಞಾವಿಧಿ ಬೋಧಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಡಿಎಆರ್ನ ಹುಚ್ಚಪ್ಪ ಕ. ಕೆಂಚಣ್ಣನವರ್ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಗೌರವಕ್ಕೆ ಭಾಜನರಾದರೆ, ಹೊರಾಂಗಣ ವಿಭಾಗದಲ್ಲಿ ಮಂಡ್ಯ ಡಿಎಆರ್ನ ಚಂದನ ಎಂ., ಒಳಾಂಗಣ ವಿಭಾಗದಲ್ಲಿ ಹುಚ್ಚಪ್ಪ, ಫೈರಿಂಗ್ ವಿಭಾಗದಲ್ಲಿ ಮಂಗಳೂರು ಡಿಎಆರ್ನ ಅರುಣ್ ಅಟಪಟಕರ ಮೊದಲ ಬಹುಮಾನ ಪಡೆದರು.
ಪಶ್ಚಿಮ ವಲಯ ಐಜಿಪಿ ಅಮಿತ್ಸಿಂಗ್, ಐಮಂಗಲ ತರಬೇತಿ ಕೇಂದ್ರದ ಅಧೀಕ್ಷಕ ಎನ್. ಶ್ರೀನಿವಾಸ್, ಹಾಸನ ತರಬೇತಿ ಕೇಂದ್ರದ ನಾಗರಾಜ್, ವಿವಿಧ ಡಿವೈಎಸ್ಪಿ, ಇನ್ಸ್ಪೆಕ್ಟರ್, ಪಿಎಸ್ಐ ಅಧಿಕಾರಿ ವರ್ಗ, ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಕುಟುಂಬದವರು, ತರಬೇತಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಕಡೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡ 488 ಶಿಬಿರಾರ್ಥಿಗಳಲ್ಲಿ ಓರ್ವ ಎಂ.ಟೆಕ್ ಪದವಿ, 52 ಎಂಜಿನಿಯರಿಂಗ್ ಪದವೀಧರರು, 47 ಸ್ನಾತಕೋತ್ತರ ಪದವೀಧರರು, 338 ಪದವೀಧರರು, 10 ಡಿಪ್ಲೊಮಾ, 26 ಪಿಯು ಮತ್ತು ಓರ್ವ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದವರು ಇದ್ದರು.
Police trainees’ graduation procession
Leave a comment