ಚಿಕ್ಕಮಗಳೂರು: ಇಂದಿನ ಮಕ್ಕಳು ಮತ್ತು ಯುವಜನತೆ ವಿದ್ಯಾವಂತರಾಗುವುದರ ಜೊತೆಗೆ ಸಂಸ್ಕಾರವಂತರೂ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸಲಹೆ ಮಾಡಿದರು.
ನಗರದ ಐಡಿಎಸ್ ಜಿ ಸರ್ಕಾರಿ ಕಾಲೇಜಿನಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿದೆ, ಆದರೆ ಶಿಕ್ಷಣವಂತರ ಸಂಖ್ಯೆ ಹೆಚ್ಚಾದಂತೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ, ವಿದ್ಯಾವಂತರಾದವರು ನಮ್ಮ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ, ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ವಿಷಾದಿಸಿದರು.
ನಮ್ಮ ಮಕ್ಕಳು ಮತ್ತು ಯುವಜನತೆ ಜೀವನದ ಶಿಕ್ಷಣವನ್ನು ಕಲಿಯದಿದ್ದರೆ, ನಮ್ಮ ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯದಿದ್ದರೆ, ಅವರು ಯಾವುದೇ ಪದವಿ ಪಡೆದರೂ ಪ್ರಯೋಜನವಿಲ್ಲ, ಅದರಿಂದ ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಯಾವುದೇ ಉಪಯೋಗವಿಲ್ಲ ಎಂದರು.
ಇಂದಿನ ಮಕ್ಕಳು ಮತ್ತು ಯುವಜನತೆ ಶಿಕ್ಷಣದ ಜೊತೆ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನೂ ಕ ಲಿಯಬೇಕು, ಶಿಸ್ತನ್ನು ಬೆಳೆಸಿಕೊಳ್ಳಬೇಕು, ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಬಂಧು ಬಾಂಧವರ ಬಾಂಧವ್ಯವನ್ನು ಉಳಿಸಿಕೊಳ್ಳಬೇಕು, ಗುರು ಹಿರಿಯರಿಗೆ ಗೌರವಿಸುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಹೆತ್ತವರು ತಮ್ಮಂತೆ ತಮ್ಮ ಮಕ್ಕಳೂ ಆಗಬಾರದು ಎಂದು ಕೂಲಿ ನಾಲಿ ಮಾಡಿ ಸಾಲ ಸೋಲ ಮಾಡಿ ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ, ಮಕ್ಕಳು ಅದನ್ನು ಅರಿಯಬೇಕು, ಹೆತ್ತವರ ಆಸೆಯನ್ನು ಪೂರೈಸಲು ಮುಂದಾಗಬೇಕು ಎಂದರು.
ಐ ಡಿ ಎಸ್ ಜಿ ಕಾಲೇಜಿಗೆ ಈಗಾಗಲೇ ಅನೇಕ ಮೂಲಭೂತ ಸೌಲಭ್ಯಗಳನ್ನು ತಾವು ಒದಗಿಸಿ ಕೊಟ್ಟಿದ್ದು, ಸದ್ಯದಲ್ಲೇ ಕಾಲೇಜಿಗೆ ಅಗತ್ಯವಿರುವ ೫೦ ಕಂಪ್ಯೂಟರ್ ಗಳನ್ನೂ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಹಳೆಗನ್ನಡದ ಪದ್ಯಗಳನ್ನು, ತತ್ವಪದ ಮತ್ತು ಜಾನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು, ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮತ್ತು ರಂಗಕರ್ಮಿ ಡಾ, ಬೇಲೂರು ರಘುನಂದನ್ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ವಾಣಿಜ್ಯೀಕರಣ ಗೊಳ್ಳುತ್ತಿದೆ, ಇದರಿಂದಾಗಿ ನೈಜ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿ ಶಿಕ್ಷಣದ ವಾಣಿಜ್ಯೀಕರಣ ನಿಲ್ಲಬೇಕು, ಸ್ವಯಂ ಕಲಿಕೆ ಪದ್ಧತಿ ಜಾರಿಗೆ ಬರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತಸನಿಮ್ ಕೌಸರ್ ಮನಿಯಾರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದೆ ಸವಿತಕ್ಕ ಗೀತ ಗಾಯನದ ಮೂಲಕ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದರು, ವಿದ್ಯಾರ್ಥಿ ಸಂಘಗಳ ನೂತನ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇದೇ ವೇಳೆ ಐಡಿಎಸ್ ಜಿ ಕಾಲೇಜಿಗೆ ನ್ಯಾಕ್ ಕಮಿಟಿಯಿಂದ ಎ ಗ್ರೇಡ್ ದೊರೆತ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸಮಾರಂಭದಲ್ಲಿ ಪ್ರಾಂಶುಪಾಲರಿಗೆ ನ್ಯಾಕ್ ಸಮಿತಿಯ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಈರೇಗೌಡ ಕಾಲೇಜಿಗೆ ೨೦ ಗಡಿಯಾರಗಳನ್ನು ಕೊಡುಗೆಯಾಗಿ ನೀಡಿದರು.
ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಎ. ಆರ್.ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ.ತಿಪ್ಪೇರುದ್ರಪ್ಪ, ಭದ್ರೇಗೌಡ, ಉಮೇಶ್, ಮೋಹನ್, ರಾದಾ ಸುಂದರೇಶ್, ಸಿ.ಪಿ.ನಾರಾಯಣ್, ರಾಜಶೇಖರ್, ಸುಮಂತ್, ಆದಿಲ್, ವಿದ್ಯಾರ್ಥಿಗಳಾದ ಹೆಚ್.ಕೆ. ಸೌಂದರ್ಯ, ಸಿ.ಸಿ.ಪ್ರಶಾಂತ್, ಸಹ ಪ್ರಾಧ್ಯಾಪಕ ಡಾ, ಲೋಕೇಶ್, ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ, ಕೆ. ಎನ್. ಲಕ್ಷ್ಮೀ ಕಾಂತ್ ಉಪಸ್ಥಿತರಿದ್ದರು.
In addition to being educated one should also become cultured.
Leave a comment