ಚಿಕ್ಕಮಗಳೂರು: ರಾಜ್ಯ ಸರ್ಕಾರದಿಂದ ಸೆಪ್ಟೆಂಬರ್ ೨೨ ರಿಂದ ಅಕ್ಟೋಬರ್ ೭ ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರಿಗೆ ನಮ್ಮ ಹಳ್ಳಿಕಾರ ಸಮುದಾಯದವರು ಜಾತಿ ಕಾಲಂನಲ್ಲಿ `ಹಳ್ಳಿಕಾರ’ ಎಂದು ಬರೆಸುವಂತೆ ಕರ್ನಾಟಕ ರಾಜ್ಯ ಹಳ್ಳಿಕಾರರ ಸಂಘದ ರಾಜ್ಯ ನಿರ್ದೇಶಕ ಸಿ.ಹೆಚ್.ಶ್ರೀನಿವಾಸ್ ಸಮುದಾಯ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನಾವೆಲ್ಲರೂ ಇದೀಗ ನಡೆಯುವ ಜಾತಿ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಬೇಕು. ಇದರಿಂದ ರಾಜ್ಯದಲ್ಲಿ ಹಳ್ಳಿಕಾರ ಸಮಾಜದ ಜನಸಂಖ್ಯೆ ನಿಖರವಾಗಿ ಗೊತ್ತಾಗಲಿದ್ದು, ಸರ್ಕಾರದಿಂದ ಪಡೆಯುವ ಸೌಲಭ್ಯಗಳ ವಿಚಾರದಲ್ಲಿ ನಮ್ಮ ಹಕ್ಕನ್ನು ಪಡೆಯಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪಶುಸಂಗೋಪನೆ ನಮ್ಮ ಕುಲಕಸುಬಾಗಿದ್ದು, ಯದುವಂಶದವರಾಗಿರುವ ನಾವು ಶ್ರೀಕೃಷ್ಣನ ಆರಾಧಕರಾಗಿದ್ದೇವೆ ಎಂಬುದು ಸ್ಪಷ್ಟ. ನಮಗೆ ಸರ್ಕಾರದಿಂದ ನಮ್ಮ ಹಕ್ಕಿಗೆ ಅನುಗುಣವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ದೊರೆಯಬೇಕಾದ ನ್ಯಾಯಯುತ ಸೌಲಭ್ಯಗಳಿಗೆ ನಾವು ನಮ್ಮ ಸಂಖ್ಯೆಯನ್ನು ಆಧರಿಸಿ ಹೋರಾಟ ನಡೆಸಬೇಕಾಗುತ್ತದೆ. ಸರ್ಕಾರದ ಮುಂದೆ ನಮ್ಮ ಬೇಡಿಕೆಯನ್ನು ಮಂಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಮೀಕ್ಷೆಯಲ್ಲಿ ನಮ್ಮ ಜನಸಂಖ್ಯೆ ಸರ್ಕಾರದ ದಾಖಲೆಗಳಲ್ಲಿ ಅಧಿಕೃತವಾಗಿ ನಮೂದಾಗುತ್ತದೆ. ಹೀಗಾಗಿ ಗಣತಿದಾರರು ಮನೆಗೆ ಬಂದಾಗ ನಮ್ಮ ಜಾತಿಯನ್ನು ಹಳ್ಳಿಕಾರ ಎಂದು ಸ್ಪಷ್ಟವಾಗಿ ಉಲ್ಲೇಖಿಸಲು ಗಣತಿದಾರರಿಗೆ ಮನವಿ ಮಾಡುವುದಲ್ಲದೆ, ಅವರು ಕೇಳುವ ಯಾವುದೇ ಪ್ರಶ್ನೆಗಳಿಗೆ ನೀಡುವ ಉತ್ತರಗಳು ನಾವು ಹಳ್ಳಿಕಾರ ಸಮುದಾಯಕ್ಕೆ ಸೇರಿದವರು ಎನ್ನುವುದಕ್ಕೆ ಪೂರಕವಾಗಿರಬೇಕು. ನಾವು ನೀಡಿದ ಮಾಹಿತಿ ಆಧಾರದ ಮೇಲೆ ಅವರು ದಾಖಲಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಮ್ಮ ಹಕ್ಕು, ಮೀಸಲಾತಿ ಈ ಜನಗಣತಿಯಲ್ಲಿ ತೀರ್ಮಾನವಾಗಲಿದ್ದು, ನಮ್ಮ ಸಮುದಾಯದವರು ಈ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.
ಜಾತಿ ಗಣತಿಯ ಬಗ್ಗೆ ಅಕ್ಕಪಕ್ಕದ ನಮ್ಮ ಸಮುದಾಯದ ಬಂಧುಗಳಲ್ಲಿ ಹಾಗೂ ಸಂಬಂಧಿಕರಲ್ಲಿ ಸ್ಪಷ್ಟವಾಗಿ ಅರಿವು ಮೂಡಿಸಬೇಕಲ್ಲದೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಅವರ ಮನವೊಲಿಸಬೇಕು. ಸಮೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ಸಮೀಕ್ಷೆಗೆ ಗಣತಿದಾರರು ಬಂದು ಹೋಗುವ ತನಕ ಊರು ಬಿಟ್ಟು ಹೋಗಬಾರದು ಎಂದು ಅವರು ಸಲಹೆ ನೀಡಿದ್ದಾರೆ.
Survey: Suggestion to write “villager” in the caste column
Leave a comment