ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಅವರು ಆರ್ಎಸ್ಎಸ್ ಹೊಗಳಿರುವುದು ಪ್ರಜಾಪ್ರಭುತ್ವ ಮತ್ತು ದೇಶ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಿದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ಪ್ರಧಾನಿಯ ನಡೆ ಅನಮಾನಕ್ಕೆ ಆಸ್ಪದ ನೀಡುವಂತಿದೆ. ಇದರ ಹಿಂದೆ ಯಾವುದೋ ರಾಜಕೀಯ ಲಾಭದ ನಿರೀಕ್ಷೆ ಇದ್ದಂತಿದೆ ಎಂದು ಲೇವಡಿ ಮಾಡಿದರು.
ನಾಗಪುರದ ಆರ್ಎಸ್ಎಸ್ ಕಚೇರಿಯಲ್ಲಿ ೨೦೦೧ ರವರೆಗೆ ರಾಷ್ಟ್ರಧ್ವಜ ಹಾರಿಸಿರಲಿಲ್ಲ ಎನ್ನುವ ಸತ್ಯ ಜನರಿಗೆ ಗೊತ್ತಿದೆ. ಕೋಮುವಾದವನ್ನು ಉಸಿರಾಗಿಸಿಕೊಂಡು ಹಿಂದೂ ಧರ್ಮವನ್ನು ರಾಜಕೀಯ ಆಯುಧ ಮಾಡಿಕೊಂಡು ಭಾರತೀಯರ ಒಡೆದಾಳಿರುವ ಆರ್ಎಸ್ಎಸ್ ಬಗ್ಗೆ ಪ್ರಧಾನಿ ಈ ಹೊತ್ತಿನಲ್ಲಿ ಹೊಗಳಿರವುದು ಸಂಶಯ ಹುಟ್ಟಿಸಿದೆ ಎಂದು ಟೀಕಿಸಿದರು.
ಮುಂದಿನ ತಿಂಗಳಿಗೆ ಅವರಿಗೆ ೭೫ ವರ್ಷ ತುಂಬಲಿದೆ. ಹೀಗಾಗಿ ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ತವಕ ಅವರಿಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ೭೫ ತುಂಬಿದ ಹಿನ್ನೆಲೆ ರಾಜಕೀಯದಿಂದ ಕೆಳಗಿಳಿಸಿದ ಸೂತ್ರ ತಮಗೂ ಅನ್ವಯಿಸಬಹುದು ಎಂಬ ಭಯ ಪ್ರಧಾನಿಗೆ ಕಾಡುತ್ತಿದೆ. ಹೀಗಾಗಿ ಪ್ರಧಾನಿ ಮೋದಿಯವರು ಈ ನಡೆ ಅನುಸರಿಸಿದಂತೆ ಕಾಣುತ್ತದೆ ಎಂದರು.
ಕೇಂದ್ರದ ಬಿಜೆಪಿ ಸರಕಾರ ಎನ್ಸಿಇಆರ್ಟಿ ಪಠ್ಯದ ಮೂಲಕ ಹೊಸ ತಲೆಮಾರಿನ ಯುವ ಸಮೂಹಕ್ಕೆ ತಪ್ಪು ಚರಿತ್ರೆಯನ್ನು ಹೇಳಹೊರಟಿರುವುದು ಖಂಡನೀಯ. ಅವರಿಗೆ ಬುದ್ದ, ಬಸವ, ಅಂಬೇಡ್ಕರ್, ಕನಕ, ಗಾಂಧಿ, ಪೆರಿಯಾರ್, ನಾರಾಯಣಗುರು, ಶರೀಫ್ ರಂತಹ ಮಾನವೀಯ ಮೌಲ್ಯದ ನಿಲುವುಗಳು ಬೇಕಿಲ್ಲ. ಹೀಗಾಗಿ ಪಠ್ಯ ಪುಸ್ತಕದಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ ಎಂದು ದೂರಿದರು.
ಕೆಪಿಸಿಸಿ ಮತ್ತೋರ್ವ ವಕ್ತಾರ ಕಶ್ಯಪ್ನಂದನ್ ಮಾತನಾಡಿ, ಪ್ರತಿ ಪಕ್ಷ ನಾಯಕ ರಾಹುಲ್ಗಾಂಧಿ ಕೇಳಿರುವ ಪ್ರಶ್ನೆಗಳಿಗೆ ಈವರೆಗೂ ಚುನಾವಣಾ ಆಯೋಗ ಉತ್ತರಿಸಿಲ್ಲ. ಆದರೆ, ರಾಹುಲ್ಗೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ತಾಕೀತು ಮಾಡುತ್ತಿದೆ. ಕೇರಳದಲ್ಲಿ ಮತ ಕಳವು ನಡೆದಿದೆ ಎಂದು ಬಿಜೆಪಿಯ ಅನುರಾಗ್ಠಾಕೂರ್ ಆರೋಪಿಸಿದಾಗ ಅವರನ್ನು ಏಕೆ ಪ್ರಮಾಣ ಪತ್ರ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ ೫ ವರ್ಷದಿಂದ ರಿ ಡಬಲ್ಪಾರ್ಮೆಟ್ ಮತದಾರರ ಪಟ್ಟಿ ಕೊಡಿ ಎಂದು ಕೇಳುತ್ತಿದ್ದೇವೆ ಕೊಟ್ಟಿಲ್ಲ. ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ ರೀತಿ ಕೆಲಸ ಮಾಡುತ್ತಿದೆ. ಕಳೆದ ೧೧ ವರ್ಷದಲ್ಲಿ ಚುನಾವಣಾ ಆಯೋಗ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಸಿಎಸ್ಡಿಸಿ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಬಯಲಾಗಿದೆ ಎಂದರು.
ರಾಜ್ಯದಲ್ಲಿ ಬಿಎಲ್ಒ ನೇಮಕಕ್ಕೆ ಚಿಲುಮೆ ಎಂಬ ಬಿಜೆಪಿ ಬೆಂಬಲಿತರ ಸಂಸ್ಥೆಯನ್ನು ರಚಿಸಿ ಅಲ್ಲೂ ಅಕ್ರಮ ನಡೆಸಲಾಗಿತ್ತು ಈ ಬಗ್ಗೆ ದೂರು ನೀಡಿದ್ದರೂ ಈವರೆಗೂ ಕ್ರಮವಾಗಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ತನೋಜ್ಕುಮಾರ್, ವಿಜಯ್ಕುಮಾರ್, ಸಂತೋಷ್ಲಕ್ಯಾ, ನಿಜಗುಣಮೂರ್ತಿ, ತ್ರಿಭುವನ್, ರವೀಶ್ ಜಾನ್ಸಾಲೆ ಇದ್ದರು.
PM Modi’s praise of RSS violates the aspirations of the Constitution
Leave a comment