ಚಿಕ್ಕಮಗಳೂರು: ದ್ವೇಷ ಭಾಷಣ ಕಾಯ್ದೆಇನ್ನೂ ಜಾರಿಗೆ ಬಂದಿಲ್ಲ. ಆದರೆ ಪೊಲೀಸರು ಜಾರಿಗೆ ಬಾರದ ಕಾಯ್ದೆ ಅಡಿ ಹಿಂದೂಪರ ಮುಖಂಡರಿಗೆ ನೋಟೀಸ್ ನೀಡುತ್ತಿದ್ದಾರೆ. ಹೀಗೆ ಮಾಡಲು ಪೊಲೀಸರಿಗೆ ಯಾವ ಧೈರ್ಯ. ಪೊಲೀಸರಿಗೆ ಕಾನೂನಿನ ಅರಿವು ಇಲ್ಲದಿದ್ದರೆ ಅವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷದಿಂದ ಸಮಾಜದ ನಡುವೆ ಕೆಲಸ ಮಾಡುತ್ತಿದೆ. ಜೊತೆಗೆ ಕುಟುಂಬದ ಮೌಲ್ಯ ಹೆಚ್ಚಿಸಲು ಅಸ್ಪೃಷ್ಯತೆ ಹೋಗಲಾಡಿಸಿ ಸಾಮರಸ್ಯ ಮೂಡಿಸುತ್ತಿದೆ. ಹೀಗಿರುವಾಗ ಪೊಲೀಸರು ಎರ್ಎಸ್ಎಸ್ನ ಪಂಚ ಪರಿವರ್ತನೆ ಕಾರ್ಯಕ್ರಮಕ್ಕೆ ನೋಟೀಸ್ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರಿಗೆ ಧೈರ್ಯವಿದ್ದರೆ ಯಾವ ಗ್ರಂಥ ಹಾಗೂ ಯಾರು ಮತೀಯ ಗಲಭೆಗೆ ಕಾರಣರಾಗುತ್ತಿವೆಯೋ ಅವರಿಗೆ ಮೊದಲು ನೋಟೀಸ್ ನೀಡಲಿ. ಮಕ್ಕಳ ಕೈಗೆ ಕಲ್ಲು ಕೊಟ್ಟು ದೇವರಿಗೆ ಕಲ್ಲು ಹೊಡೆಸುವವರಿಗೆ, ಯಾವ ಮತೀಯ ಗ್ರಂಥ ಜಾಗತಿಕ ಭಯೋತ್ಪಾದನೆಗೆ ಕಾರಣವಾಗುತ್ತಿದೆಯೋ ಅವರಿಗೆಲ್ಲಾ ಮೊದಲು ನೋಟೀಸ್ ನೀಡಿ ಎಂದು ಸವಾಲು ಹಾಕಿದರು.
ಭಯೋತ್ಪಾದನೆಗೆ ಕಾರಣರಾಗುತ್ತಿರುವವರಿಗೆ ನೋಟೀಸ್ ನೀಡಲು ಪೊಲೀಸರಿಗೆ ಧೈರ್ಯವಿಲ್ಲವೇ ಎಂದು ಪ್ರಶ್ನಿಸಿದ ಸಿ.ಟಿ.ರವಿ, ರಾಷ್ಟ್ರ ಭಕ್ತಿ ಮೂಡಿಸುವ ಸಂಘಟನೆಗಳಿಗೆ, ವ್ಯಕ್ತಿಗಳಿಗೆ ನೋಟೀಸ್ ನೀಡಿ, ಪಾಕಿಸ್ತಾನ್ ಜಿಂದಾಬಾದ್ ಎನ್ನುವವರಿಗೆ ನೋಟೀಸ್ ನೀಡದೆ ಪೊಲೀಸರು ನಗೆಪಾಟಲಿಗೀಡಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಕ್ರಮ ಬಾಂಗ್ಲಾದೇಶೀಯರನ್ನು ಹಿಡಿದುಕೊಟ್ಟವರ ಮೇಲೆಯೇ ಪೊಲೀಸರು ದೂರು ದಾಖಲಿಸುತ್ತಾರೆ. ಆದರೆ 1500 ರೂ. ಪಡೆದು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿಕೊಡುವ ದೇಶದ್ರೋಹಿಗಳನ್ನು ಹಿಡಿಯುವುದಿಲ್ಲ. ಪೊಲೀಸರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೋಟೀಸ್ ನೀಡುವ ಮೂಲಕ ನಮ್ಮನ್ನು ಎದುರಿಸಬಹುದು ಎಂದು ಪೊಲೀಸರು ತಿಳಿದುಕೊಂಡರೆ ಅದು ತಪ್ಪು ತಿಳಿವಳಿಕೆ. ನೋಟೀಸ್ ನೀಡುವ ಮೂಲಕ ನಮ್ಮನ್ನು ಹೆದರಿಸಲೂ ಸಾಧ್ಯವಾಗುವುದಿಲ್ಲ. ಜೊತೆಗೆ ನಾವು ಸತ್ಯ ಹೇಳುವುದನ್ನು ನಿಲ್ಲಿಸಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
Notice to pro-Hindu leaders – How dare the police do this?
Leave a comment