ಚಿಕ್ಕಮಗಳೂರು : ತಾಯಿ ಮನೆಗೆ ಬರಲಿಲ್ಲ ಎಂದು ಅಳಿಯ ಮಾವನ ಮೇಲೆ ಮಚ್ಚು ಬೀಸಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ನಡೆದಿದೆ. ಕಡೂರು ಪಟ್ಟಣದಲ್ಲಿ ಆಟೋ ಓಡಿಸುತ್ತಿರುವ ಭರತ್ ಮಾವನ ಮೇಲೆ ಮಚ್ಚು ಬೀಸಿದ ಯುವಕ. ಭರತ್ ತಾಯಿ ಗಂಡನ ಜೊತೆ ಜಗಳವಾಡಿ ತವರು ಸೇರಿದ್ದರು. ಗಂಡನ ಮನೆಗೆ ಬಂದಿರಲಿಲ್ಲ. ಮಗ ಭರತ್ ಅಮ್ಮನಿಗೆ ಮನೆಗೆ ಬರುವಂತೆ ಹೇಳಿದ್ದನು. ಜೊತೆಗೆ, ಅಮ್ಮನನ್ನು ಮನೆಗೆ ಕಳುಹಿಸುವಂತೆ ಮಾವ ಮಹಾಲಿಂಗನಿಗೂ ಹೇಳಿದ್ದನು. ಆದರೂ, ತಾಯಿ ಗಂಡನ ಮನೆಗೆ ಹೋಗಿರಲಿಲ್ಲ. ಈ ಬಗ್ಗೆ ಭರತ್ ಮಾವ ಮಹಾಲಿಂಗ ಭರತ್ ಹಾಗೂ ಆತನ ತಂದೆ ರಾಮಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನೀವು ನನ್ನ ತಂಗಿಗೆ ಸಾಕಷ್ಟು ಹಿಂಸೆ ನೀಡಿದ್ದೀರಾ. ಹಾಗಾಗಿ ಅವಳನ್ನ ಕಳಿಸುವುದಿಲ್ಲ. ಅಪ್ಪ-ಮಗ ಇಬ್ಬರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದನು.
ಆದರೂ, ಭರತ್ ಮೇಲಿಂದ ಮೇಲೆ ಫೋನ್ ಮಾಡಿ ಅಮ್ಮನನ್ನು ಕಳುಹಿಸುವಂತೆ ಬಲವಂತ ಮಾಡಿದ ಪರಿಣಾಮ ಮಾವ ಮಹಾಲಿಂಗ ಡಿಸೆಂಬರ್ 31ರಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದರು ಎಂಬ ಸಿಟ್ಟಿನಿಂದ ಭರತ್ ಹಾಡಹಗಲೇ ನಡು ರಸ್ತೆಯಲ್ಲಿ ಮಾವನ ಮೇಲೆ ಮನಸ್ಸೊ ಇಚ್ಚೆ ಮಚ್ಚು ಬೀಸಿದ್ದಾನೆ. ಕಡೂರು ಪಟ್ಟಣದಲ್ಲಿ ಆಟೋ ಡ್ರೈವರ್ ವೃತ್ತಿ ಮಾಡುತ್ತಿರುವ ಭರತ್ ಆಟೋ ಹಿಂದೆ ಲಾಂಗ್ ಇಟ್ಟು ಮಾವನನ್ನ ಹುಡುಕಾಡಿದ್ದಾನೆ. ಕಡೂರು ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ಕ್ಯಾಂಟೀನ್ ಹತ್ತಿರ ಟೀ ಕುಡಿಯುತ್ತಿದ್ದ ಮಾವನ ಮೇಲೆ ಮನಸ್ಸೊ ಇಚ್ಛೆ ಲಾಂಗ್ ಬೀಸಿದ್ದಾನೆ. ಲಾಂಗ್ ಬೀಸಿದ ಬಳಿಕ ರಾಜರೋಷವಾಗಿ ಬಂದು ಆಟೋದಲ್ಲಿ ಲಾಂಗ್ ಇಟ್ಟುಕೊಂಡು ವಾಪಸ್ ಹೋಗಿದ್ದಾನೆ.
ಹಲ್ಲೆಗೊಳಗಾದ ಭರತ್ ಮಾವ ಮಹಾಲಿಂಗ ಅವರ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಡೂರು ಪೊಲೀಸರು ಅಪ್ಪ ರಾಮಸ್ವಾಮಿ ಹಾಗೂ ಮಗ ಭರತ್ ನನ್ನ ವಶಕ್ಕೆ ಪಡೆದು ಕೋರ್ಟಿಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment