ಚಿಕ್ಕಮಗಳೂರು: ಅಜ್ಜಂಪುರದಲ್ಲಿ ಕೇವಲ 1000 ರೂಪಾಯಿ ಹಣದ ವಿಚಾರಕ್ಕಾಗಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕ್ಕಮಗಳೂರು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿದ್ದ ಈ ಘೋರ ಕೃತ್ಯದಲ್ಲಿ ಆರೋಪಿ ಮಂಜುನಾಥ್ಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಆರೋಪಿ ಮಂಜುನಾಥ್ ಮತ್ತು ಮೃತ ವೆಂಕಟಾಚಲಪತಿ ಇಬ್ಬರೂ ಸ್ನೇಹಿತರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. 2021ರ ಜುಲೈ 27ರಂದು ಅಜ್ಜಂಪುರದ ಸಂತೆ ಮೈದಾನದ ಹೋಟೆಲ್ನಲ್ಲಿ ಮಂಜುನಾಥ್ ತನಗೆ ಬರಬೇಕಿದ್ದ 1000 ರೂ. ಹಣವನ್ನು ವೆಂಕಟಾಚಲಪತಿಯ ಬಳಿ ಕೇಳಿದ್ದಾನೆ.
ಈ ಸಂದರ್ಭದಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಮಂಜುನಾಥ್, ಅಂದೇ ರಾತ್ರಿ 11:30ರ ಸುಮಾರಿಗೆ ಕಾಲೇಜು ಮೈದಾನದ ರಂಗಮಂದಿರದಲ್ಲಿ ಮಲಗಿದ್ದ ವೆಂಕಟಾಚಲಪತಿಯ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದನು.
ಈ ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿ ಮಂಜುನಾಥ್ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದೆ. ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದ ಸಮಗ್ರ ತನಿಖೆಯನ್ನು ಅಜ್ಜಂಪುರ ಪೊಲೀಸ್ ಠಾಣೆಯ ದಿವಂಗತ ಪೊಲೀಸ್ ನಿರೀಕ್ಷಕ ಲಿಂಗರಾಜು ಅವರು ನಡೆಸಿ, ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಶ್ರೀಮತಿ ಭಾವನ ಅವರು ನ್ಯಾಯಾಲಯದಲ್ಲಿ ಪ್ರಬಲವಾಗಿ ವಾದ ಮಂಡಿಸಿದ್ದರು. ತನಿಖಾ ಸಹಾಯಕ ಎ.ಎಸ್.ಐ ಚಂದ್ರಶೇಖರ್ ಹಾಗೂ ಸಿ.ಪಿ.ಸಿ ಮಂಜುನಾಥ ಬಿ ಅವರು ನ್ಯಾಯಾಲಯದ ಕರ್ತವ್ಯದಲ್ಲಿ ಸಹಕರಿಸಿದ್ದರು.
Murder accused gets life sentence
Leave a comment