ಚಿಕ್ಕಮಗಳೂರು: ರಂಗಭೂಮಿ ನಾಟಕಗಳು ಸಮಾಜ ಪರಿವರ್ತನೆಗೆ ನಾಂದಿಯಾಗಿದ್ದು, ಪ್ರತಿಯೊಬ್ಬರೂ ನಾಟಕ ವೀಕ್ಷಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಅವರು ಕುವೆಂಪು ಕಲಾಮಂದಿರದಲ್ಲಿ ಬಸವತತ್ವ ಪೀಠ, ಕಲಾ ಸೇವಾಸಂಘ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಲಯನ್ ಸಂಸ್ಥೆ, ಸುಗಮ ಸಂಗೀತ ಗಂಗಾ, ಎಐಟಿ, ಆಶ್ರಯ ಫೌಂಡೇಷನ್, ಕಲ್ಕಟ್ಟೆ ಪುಸ್ತಕದ ಮನೆ, ಜೆಸಿ ಸಂಸ್ಥೆ, ಪೂರ್ವಿ ಸುಗಮಸಂಗೀತ ಅಕಾಡೆಮಿ, ಶಿವಮೊಗ್ಗದ ಸಹ್ಯಾದ್ರಿ ರಂಗಭೂಮಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಲಕ್ಷ್ಮಣ ತುಕಾರಾಂ ಗೋಲೆ’ ನಾಟಕ ಪ್ರದರ್ಶನದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೂರದರ್ಶನ ಮನುಷ್ಯನನ್ನು ಚಿಕ್ಕದಾಗಿ ತೋರಿಸಿದರೆ, ಸಿನಿಮಾ ದೊಡ್ಡದಾಗಿ ತೋರಿಸುತ್ತದೆ. ರಂಗಭೂಮಿ ಮಾತ್ರ ಮನುಷ್ಯನನ್ನು ಮನುಷ್ಯನಾಗಿ ಬಿಂಬಿಸುತ್ತದೆ ಎಂದು ವಿಶ್ಲೇಷಿಸಿದರು.
ವಾಸ್ತವ ಬದುಕಿನಲ್ಲಿ ರಂಗಭೂಮಿ ಮನುಷ್ಯನನ್ನು ಮುನುಷ್ಯನಾಗಿ ತೋರಿಸುವ ಕಲಾ ಪ್ರಕಾರವೇ ನಾಟಕಗಳು ಎಂದ ಅವರು, ಪಾತಕಿ ಲೋಕದ ಅಪರಾಧದಿಂದ ಹೊರಬಂದು ಗಾಂಧೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡ ಲಕ್ಷ್ಮಣ್ ತುಕಾರಾಂ ಗೋಲೆ ನಾಟಕ ಅವರ ಜೀವನ ಚರಿತ್ರೆಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಮನುಷ್ಯನಿಗೆ ಪರಿವರ್ತನೆಗೆ ಒಂದು ಒಳ್ಳೆಯ ಅವಕಾಶವಿದೆ. ಪ್ರತಿ ಪಾಪಿಗೂ ಒಂದು ಭವಿಷ್ಯ ಇದೆ. ಅದರಂತೆ ಒಳ್ಳೆಯ ಭವಿಷ್ಯ ರೂಪಿಸುವ ನಾಟಕ ಇದಾಗಿದ್ದು, ಎಲ್ಲರೂ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕಾದ ಅಗತ್ಯ ಇದೆ ಎಂದರು. ಮುಂದಿನ ದಿನಗಳಲ್ಲಿ ಈ ರೀತಿಯ ಸಾಮಾಜಿಕ ಬದಲಾವಣೆಯ ನಾಟಕಗಳನ್ನು ಹೆಚ್ಚು ಹೆಚ್ಚು ಪ್ರದರ್ಶನದ ಮೂಲಕ ಜನರ ಮನಃಪರಿವರ್ತನೆಗೆ ನಾಂದಿಯಾಗಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಮೋಹನ್ ದಾಸ್ರನ್ನು ಮಹಾತ್ಮಾ ಗಾಂಧಿಯಾಗಿ ಪರಿವರ್ತನೆ ಮಾಡಿದ್ದು ಅವರು ಚಿಕ್ಕಂದಿನಲ್ಲಿ ಹರಿಶ್ಚಂದ್ರ ನಾಟಕವನ್ನು ವೀಕ್ಷಿಸಿದ್ದರು ಎಂದು ಹೇಳಿದರು. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಇಂತಹ ಸಾಮಾಜಿಕ ಪರಿವರ್ತನೆಯ ನಾಟಕಗಳ ಪ್ರದರ್ಶನ ಜನರಲ್ಲಿ ಭಾವನಾತ್ಮಕ ವಿಚಾರಧಾರೆಗಳು ನೆಲೆಸಲು ಪೂರಕ ಎಂದರು.
ಪರಿವರ್ತನೆ ದಾರಿಯಲ್ಲಿ ಸಾಗಬೇಕಾದರೆ ಎಲ್ಲರಿಗೂ ಅವಕಾಶವಿದೆ ಎಂಬುದನ್ನು ಗಾಂಧೀಜಿ ಮನಗಂಡಿದ್ದರು. ಇಂತಹ ಅವಕಾಶಗಳಿಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿದ್ದು, ರಂಗಭೂಮಿ ನಾಟಕಗಳ ಪ್ರದರ್ಶನ ಯಶಸ್ವಿಯಾಗಲಿ ಎಂದು ಹೇಳಿದರು. ಖ್ಯಾತ ಮಕ್ಕಳ ತಜ್ಞ ಡಾ. ಜಿ.ಪಿ. ಕೃಷ್ಣೇಗೌಡ ಮಾತನಾಡಿ, ಮನುಷ್ಯನಲ್ಲಿ ನಿಜವಾದ ಕಲೆ ಉಳಿದಿದೆ ಅಂದರೆ ಅದು ರಂಗಭೂಮಿ ಕಲಾವಿದರಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ತಿಳಿಸಿದರು.
ಆರ್ಕೆಸ್ಟ್ರಾ, ಸಿನಿಮಾ, ದೂರದರ್ಶನ, ಮೊಬೈಲ್ ಮುಂತಾದವುಗಳ ಗೀಳಿಗೆ ಬಿದ್ದು ವೀಕ್ಷಣೆಯಲ್ಲಿ ಜನತೆ ಮುಂದಾಗಿ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ರೀತಿಯ ಸಾಮಾಜಿಕ ಪರಿವರ್ತನೆಯ ಉತ್ತಮ ನಾಟಕ ಪ್ರದರ್ಶನ ನೋಡಲು ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿರುವುದು ವಿಷಾಧನೀಯ ಎಂದರು.
ತುಕಾರಾಂರವರು ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜ ಪರಿವರ್ತನೆಯ ನಾಟಕವನ್ನು ನಿರ್ದೇಶಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಇಲ್ಲಿಗೂ ಬರುವಂತೆ ಲಕ್ಷ್ಮಣ ಅವರಿಗೆ ಆಹ್ವಾನ ನೀಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಮಂಜುಳ ಹುಲ್ಲಳ್ಳಿ, ಎಐಟಿ ರಿಜಿಸ್ಟ್ರಾರ್ ಡಾ. ಸಿ.ಕೆ ಸುಬ್ರಾಯ, ಪ್ರಾಂಶುಪಾಲ ಡಾ. ಸಿ.ಟಿ ಜಯದೇವ್, ಕಾಂತೇಶ್ ಕದರ ಮಂಡಲಗಿ, ಲಯನ್ಸ್ ಅಧ್ಯಕ್ಷ ಕುಮಾರ್ ಸಿ.ಎನ್, ಗಾಯಕ ಎಂ.ಎಸ್ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಲಯನ್ಸ್ ಪ್ರಧಾನ ಕಾರ್ಯದರ್ಶಿ ಗೋಪಿಕೃಷ್ಣ ವಂದಿಸಿದರು.
‘Lakshman Tukaram Gole’ play performance
Leave a comment