ಚಿಕ್ಕಮಗಳೂರು: : ರಾಜ್ಯಸರ್ಕಾರ ಶೋಷಿತ ವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರುವ ಮೂಲಕ ಅವರ ಆರ್ಥಿಕ ಸದೃಢಗೊಳಿಸುವ ಜೊತೆಗೆ ಶೈಕ್ಷಣಿಕವಾಗಿ ಗಟ್ಟಿಗೊಳ್ಳಬೇಕೆಂಬ ಉದ್ದೇಶ ಹೊಂದಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ಕ್ಷೇತ್ರದ ಹಿರೇಗೌಜ ಗ್ರಾ.ಪಂ ವ್ಯಾಪ್ತಿಯ ಸಾದರಹಳ್ಳಿ ಗ್ರಾಮದಲ್ಲಿ ಊರ ಮುಂದಿನ ಕೆರೆಯಿಂದ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಯಿಂದ ೫೦ ಲಕ್ಷ ರೂ ವೆಚ್ಚದಲ್ಲಿ ರಸ್ತೆ ಮಧ್ಯೆ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಬಳಕೆ ಮಾಡುತ್ತಿರುವುದರಿಂದ ಅಭಿವೃದ್ಧಿಗೆ ಹಣವಿಲ್ಲದೆ ರಾಜ್ಯಸರ್ಕಾರ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷದವರ ಆರೋಪಕ್ಕೆ ಈ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯಸರ್ಕಾರದ ಜನಪರ ಯೋಜನೆಗಳನ್ನು ಮಾದರಿಯಾಗಿಟ್ಟುಕೊಂಡು ಬಿಜೆಪಿ ಇಡೀ ದೇಶದ ಚುನಾವಣೆಗಳನ್ನು ನಡೆಸುತ್ತಿದ್ದಾರೆ. ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್ ಮುಂತಾದ ಮಹಾ ಪುರಷರ ವಿಚಾರಧಾರೆ ಮತ್ತು ಆದರ್ಶ ಕನಸುಗಳನ್ನು ರಾಜ್ಯಸರ್ಕಾರ ಸಾಕಾರಗೊಳಿಸುತ್ತಿದೆ ಎಂದರು.
ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡಿದವರನ್ನು ಜನತೆ ವಿರೋಧಪಕ್ಷದಲ್ಲಿ ಕೂರಿಸಿದ್ದಾರೆ ಎಂಬುದನ್ನು ಮನಗಾಣಬೇಕು. ಕಾಂಗ್ರೆಸ್ ಸರ್ಕಾರಕ್ಕೆ ೧೩೮ ಸ್ಥಾನಗಳನ್ನು ನೀಡಿ ಅಧಿಕಾರ ನೀಡಿದ್ದಾರೆ. ಇದಕ್ಕಾಗಿ ಸರ್ಕಾರ ಧೀನದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಬಡಜನರ ಪರವಾಗಿ ಕೆಲಸಮಾಡುತ್ತಿದ್ದು, ಅಭಿವೃದ್ಧಿಯಲ್ಲಿ ಹಿಂದೆ ಬೀಳದೆ ಸಾಧನೆ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಸಾದರಹಳ್ಳಿಯಿಂದ ಕ್ಯಾತನಬೀಡುವರೆಗೆ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಮನವಿ ನೀಡಿದ ಹಿನ್ನೆಲೆಯಲ್ಲಿ ಈಗಾಗಲೆ ೬೦ ಲಕ್ಷ ರೂ. ಮೀಸಲಿಟ್ಟಿದ್ದು, ಸಧ್ಯದಲ್ಲೇ ರಸ್ತೆ ಅಭಿವೃದ್ಧಿಗೆ ಕಾರ್ಯಯೋಜನೆ ಜಾರಿಮಾಡುವುದಾಗಿ ಭರವಸೆ ನೀಡಿದರು.
ಕ್ಷೇತ್ರದ ಹಲವಾರು ರಸ್ತೆಗಳು ನಗರದಲ್ಲಿ ಮಾ.೩೧ ರೊಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿವೆ. ಅದೇ ರೀತಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದ್ದು, ಬಹುತೇಕ ರಸ್ತೆಗಳ ಅಭಿವೃದ್ಧಿ ಕಾರ್ಯ ಇದೇ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಜಿನಿಯರ್ಗಳು ಶಾಶ್ವತವಾಗಿ ಉಳಿಯುವ ಸೇತುವೆಯ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಒತ್ತಡ ಹಾಕಿ ಕೆಲಸ ಮಾಡಿಸಬೇಕು ಎಂದು ಸೂಚಿಸಿದ ಅವರು, ಹಿಂದೂ ದೇವಾಲಯ ಮತ್ತು ಸಮುದಾಯ ಭವನಗಳಿಗೆ ೭ ಕೋಟಿ ರೂ. ವ್ಯಯಿಸಿ ಕ್ಷೇತ್ರದಲ್ಲಿ ಇರುವ ೩೪ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ ಎಂದರು.
ಮಾಜಿ ಜಿ.ಪಂ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಮಾತನಾಡಿ, ಶಾಸಕ ಹೆಚ್.ಡಿ ತಮ್ಮಯ್ಯ ಅವರು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಅತಿವೃಷ್ಟಿ ಹಾನಿಯಿಂದ ಸಂಪೂರ್ಣ ಕೊಚ್ಚಿಹೋಗಿದ್ದ ಗ್ರಾಮದ ಸೇತುವೆ ನಿರ್ಮಾಣಕ್ಕೆ ೧೦ ಲಕ್ಷ ರೂಗಳನ್ನು ಭೂಸೇನಾ ನಿಗಮಕ್ಕೆ ನೀಡಿದ್ದರು. ಪರಿಶೀಲಿಸಿದ ಅಧಿಕಾರಿಗಳು ಹೆಚ್ಚಿನ ಅನುದಾನ ಬೇಕಾಗುತ್ತದೆ ಎಂಬ ಮನವಿ ಮೇರೆಗೆ ೫೦ ಲಕ್ಷ ರೂ. ವೆಚ್ಚದಲ್ಲಿ ಉತ್ತಮವಾದ ಸೇತುವೆ ನಿರ್ಮಾಣ ಮಾಡಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.
ಸಾದರಹಳ್ಳಿ ಗ್ರಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಗೌಜ ಗ್ರಾ.ಪಂ ಅಧ್ಯಕ್ಷೆ ಮಂಜುಳ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲಾ, ಗ್ರಾಮಸ್ಥರಾದ ಬೀರೇಗೌಡ, ಮಲ್ಲೇಗೌಡ, ಶಿವಕುಮಾರ್, ಈಶ್ವರಯ್ಯ, ನಾಗಣ್ಣ, ಜಗದೀಶ್, ಪರಮೇಶ್, ಲೋಕಯ್ಯ, ಹುಲಿಯಪ್ಪ, ಕಾಂತರಾಜ್, ಮಧು, ಶಶಿಧರ್, ಸಿದ್ದೇಗೌಡ, ಸಿದ್ದೇಶ್ ಹಾಗೂ ಎಇಇ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಮೊದಲಿಗೆ ಗ್ರಾ.ಪಂ ಸದಸ್ಯ ಶಿವಕುಮಾರ್ ಸ್ವಾಗತಿಸಿದರು.
Construction of a bridge at a cost of Rs. 50 lakh in Sadarahalli village
Leave a comment