ಚಿಕ್ಕಮಗಳೂರು: ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮಾ ಶೈಲಿಯ ದರೋಡೆ ಪ್ರಕರಣವೊಂದು ನಡೆದಿದ್ದು, ಲಿಫ್ಟ್ ಕೇಳುವ ನೆಪದಲ್ಲಿ ಕಾರು ಹತ್ತಿದ ಮಹಿಳೆಯರಿಬ್ಬರು ದರೋಡೆಕೋರರೊಂದಿಗೆ ಸೇರಿ ಹಣ ಮತ್ತು ಮೊಬೈಲ್ ದೋಚಿದ್ದಾರೆ.
ತುಮಕೂರು ಜಿಲ್ಲೆಯ ಪ್ರವೀಣ್ ಮತ್ತು ಚೇತನ್ ಎಂಬುವವರು ಕಡೂರಿನಿಂದ ಚಿಕ್ಕಮಗಳೂರಿಗೆ ಕಾರಿನಲ್ಲಿ ಹೊರಟಿದ್ದಾಗ, ಪರಿಚಯಸ್ಥರ ಶಿಫಾರಸಿನ ಮೇರೆಗೆ ಶ್ರಾವ್ಯ ಮತ್ತು ಕಾವ್ಯ ಎಂಬ ಹೆಸರಿನ ಇಬ್ಬರು ಮಹಿಳೆಯರನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದರು.
ಮಾರ್ಗಮಧ್ಯೆ ಹಿರೇಗೌಜ ಬಸ್ ನಿಲ್ದಾಣದ ಬಳಿ ವಿಡಿಯೋ ಕಾಲ್ ಮಾಡುವ ನೆಪದಲ್ಲಿ ಕಾರನ್ನು ನಿಲ್ಲಿಸಿದ ಮಹಿಳೆಯರು, ಅಲ್ಲಿಯೇ ಹೊಂಚು ಹಾಕಿದ್ದ ಐವರು ದರೋಡೆಕೋರರ ಗುಂಪಿಗೆ ದಾರಿ ಮಾಡಿಕೊಟ್ಟಿದ್ದಾರೆ. ಕಾರಿಗೆ ಅಡ್ಡಬಂದ ದುಷ್ಕರ್ಮಿಗಳು ಪ್ರವೀಣ್ ಮತ್ತು ಚೇತನ್ ಮೇಲೆ ಹಲ್ಲೆ ನಡೆಸಿ, ಚಾಕು ತೋರಿಸಿ ಬೆದರಿಸಿ ಪರ್ಸ್ ಹಾಗೂ ಬೆಲೆಬಾಳುವ ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡಿದ್ದಾರೆ.
ಈ ವೇಳೆ ಪ್ರವೀಣ್ ಗುಟ್ಟಾಗಿ ತಮ್ಮ ಸ್ನೇಹಿತ ಮಂಜುನಾಥ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಮಂಜುನಾಥ್ ಮತ್ತು ಅವರ ಸ್ನೇಹಿತರು ದರೋಡೆಕೋರರು ಇದ್ದ ಕಾರನ್ನು ಹಿಂಬಾಲಿಸಿ ಹಿರೇಗೌಜ ಕ್ರಾಸ್ ಬಳಿ ಅಡ್ಡಗಟ್ಟಿದ್ದಾರೆ. ಸ್ಥಳೀಯರ ಸಹಾಯದಿಂದ ರಮೇಶ್, ನವೀನ್, ರಘು, ಹರೀಶ್ ಹಾಗೂ ಶ್ರಾವ್ಯ (ವೀಣಾ) ಮತ್ತು ಕಾವ್ಯ (ಮಧು) ಎಂಬುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ತಪ್ಪಿಸಿಕೊಂಡಿರುವ ಸುಹಾಸ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಬಂಧಿತರಿಂದ ನಗದು ಮತ್ತು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
Cinema-style robbery in Sakharayapattana
Leave a comment