ಚಿಕ್ಕಮಗಳೂರು: ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ೧೩ ನಿರ್ದೇಶಕರ ಸ್ಥಾನಗಳಿಗೆ ಜ.೧೭ ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ೧೧ ಮತ್ತು ಜೆಡಿಎಸ್ನ ೨ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಅವರು ಇಂದು ಡಿಸಿಸಿ ಬ್ಯಾಂಕ್ನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಿಕೊಂಡು ಸಭೆ ನಡೆಸಲಾಗಿದ್ದು, ಎರಡೂ ಪಕ್ಷಗಳ ಮುಖಂಡರು ಸೇರಿ ಬಿಜೆಪಿ ೧೧ ಕ್ಷೇತ್ರದಲ್ಲಿ ಮತ್ತು ಜೆಡಿಎಸ್ ೨ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ನಿರ್ಣಯಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಜ.೨ ರಿಂದ ನಾಮಪತ್ರ ಸಲ್ಲಿಕೆಯಾಗುತ್ತಿದ್ದು, ಇಂದು(ಜ.೯) ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಇರುವುದಿಲ್ಲ, ರಾಜಕೀಯ ಪಕ್ಷಗಳು ಇರುವುದಿಲ್ಲ. ಆಂತರಿಕ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಮೊದಲ ಬಾರಿಗೆ ೧೯೯೧ ರಲ್ಲಿ ಆಲ್ದೂರು ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ತಾವು ಬೇರೆ ಬೇರೆ ಕಾರಣಗಳಿಂದಾಗಿ ಅದರಲ್ಲಿ ಮುಂದುವರೆಯಲು ಸಾಧ್ಯವಾಗಿರಲಿಲ್ಲ. ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ಸಹಕಾರಿ ಕ್ಷೇತ್ರದ ಮೂಲಕ ಎಂದು ಸ್ಪಷ್ಟಪಡಿಸಿದರು.
ನಿರ್ದೇಶಕರ ಅಪೇಕ್ಷೆ ಮತ್ತು ಪಕ್ಷದ ನಿರ್ಣಯದಂತೆ ತಾವು ಸ್ಪರ್ಧೆ ಮಾಡಿದ್ದು, ಇದರಲ್ಲಿ ವಯಕ್ತಿಕ ಆಕಾಂಕ್ಷೆ ಏನೂ ಇಲ್ಲ. ಭೂತ್ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ರಾಜಕೀಯ ಮಾಡಿರುವುದಾಗಿ ತಿಳಿಸಿದರು.
ಬಳ್ಳಾರಿ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಕಾಂಗ್ರೆಸ್ನವರೇ ಹತ್ಯೆ ಮಾಡಿ ಬಿಜೆಪಿ ತಲೆಗೆ ಕಟ್ಟುವ ಷಡ್ಯಂತ್ರ ನಡೆದಿದ್ದು, ಮಾಧ್ಯಮದವರು ಬಿಡುಗಡೆ ಮಾಡಿದ ವಿಡಿಯೋ ತುಣುಕು ಇಲ್ಲದಿದ್ದರೆ ಬಿಜೆಪಿ ಇದರ ಹೊಣೆ ಹೊರಬೇಕಾಗಿತ್ತು. ಆದರೆ, ಈ ಘಟನೆಯನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿದರು.
ಈ ಘಟನೆಯ ಸಮಗ್ರ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸಿದ ಅವರು, ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವ ಅಮಾನವೀಯ ಘಟನೆಯಾಗಿದ್ದು, ಮಹಿಳೆಯನ್ನು ವಿವಸ್ತ್ರಗೊಳಿಸಿರುವುದು ಸರಿಯಲ್ಲ, ಸಂತ್ರಸ್ಥೆ ಮೇಲೆ ಹಾಕಿರುವ ಕೇಸುಗಳನ್ನು ವಾಪಾಸ್ ತೆಗೆದು ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಚಿಕ್ಕಮಗಳೂರಿನಲ್ಲಿ ಬಾಂಧವ್ಯ ಅಬಾಧಿತವಾಗಿದ್ದು, ಇದೊಂದೇ ಚುನಾವಣೆ ಅಲ್ಲ, ಮುಂದಿನ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸುತ್ತೇವೆ. ಸಹಕಾರಿ ಕ್ಷೇತ್ರ ರೈತ ಸಮುದಾಯದ ಸಂಸ್ಥೆಯಾಗಿದ್ದು, ಪುರೋಭಿವೃದ್ಧಿಗಾಗಿ ಒಗ್ಗಟ್ಟಾಗಿ ಚುನಾವಣೆ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಜೆಡಿಎಸ್ಗೆ ೨, ಬಿಜೆಪಿಗೆ ೧೧ ಸ್ಥಾನ ಸ್ಪರ್ಧೆ ಮಾಡಲು ಅವಕಾಶವಿದ್ದು, ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ವಿಧಾನ ಪರಿಷತ್ ಉಪಸಭಾಪತಿಯಾಗಿದ್ದ ಎಸ್.ಎಲ್ ಧರ್ಮೇಗೌಡ ಪ್ರತಿನಿಧಿಸುತ್ತಿದ್ದ ಹಾಲು ಉತ್ಪಾದಕರ ಸಹಕಾರಿ ಕ್ಷೇತ್ರದಿಂದ ಅವರ ಮಗ ಸೋನಾಲ್ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ಮುಖಂಡರುಗಳಾದ ಕಲ್ಮುರಡಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್, ಮುಖಂಡರುಗಳಾದ ಕುಮಾರೇಗೌಡ, ಗೋಪಿ ಮತ್ತಿತರರು ಉಪಸ್ಥಿತರಿದ್ದರು.
C.T. Ravi-S.L. Bhojegowda nomination for DCC Bank
Leave a comment