ಚಿಕ್ಕಮಗಳೂರು: ಕೊಡಗು-ಚಿಕ್ಕಮಗಳೂರು ಪಶ್ಚಿಮಘಟ್ಟ ಪ್ರದೇಶವಾಗಿದ್ದು, ವನ್ಯ ಜೀವಿ ಮಾನವ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಹಾಗಾಗಿ ಈ ಬಾರಿ ಬಜೆಟ್ನಲ್ಲಿ ಇದಕ್ಕಾಗಿ ಸಾಕಷ್ಟು ಹಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ. ಡೀಮ್ಡ್ ಫಾರೆಸ್ಟ್ ಪ್ರದೇಶ ಸಾರ್ವಜನಿಕ ಉಪಯೋಗಕ್ಕೆ ಬಳಸಲು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ನಿರ್ಧರಿಸಿದ್ದಾರೆ. ಅದರಂತೆ ಜಂಟಿ ಸರ್ವೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ ೫೦ ಸಾವಿರ ಎಕರೆ ಭೂಮಿ ಸಾರ್ವಜನಿಕ ಉಪಯೋಗಕ್ಕೆ ಕೊಡುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ೫೬ ಸಾವಿರ ಉದ್ಯೋಗ ಯುವ ಜನತೆಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಅವರು ಶನಿವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನಗಳ ಹಕ್ಕುಪತ್ರ, ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಇತರೇ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸುಲಭದ ಮಾತಲ್ಲ. ಆದರೂ ರಾಜ್ಯ ಸರ್ಕಾರ ಜನಪರವಾದ ಯೋಜನೆಗಳು ಜಾರಿ ಮಾಡುವ ಮೂಲಕ ಇತರೇ ರಾಜ್ಯಗಳಿಗಿಂತ ಉತ್ತಮ ಆಡಳಿತ ನಮ್ಮ ಸರಕಾರ ನೀಡುತ್ತಿದೆ. ೧೯೯೦ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಆಶ್ರಯ ನಿವೇಶನ ನೀಡಲಾಗುತ್ತಿತ್ತು.
ಆ ಸಂದರ್ಭದಲ್ಲೂ ಸರ್ಕಾರಿ ಜಾಗ ಇರಲಿಲ್ಲ. ಆಗ ಖಾಸಗಿ ಜಾಗವನ್ನು ಖರೀದಿಸಿ ಜನರ ಉಪಯೋಗಕ್ಕೆ ನೀಡಲಾಗಿತ್ತು. ಈಗಲೂ ಅದೇ ಸಂದರ್ಭ ಎಲ್ಲೆಡೆ ಸೃಷ್ಟಿಯಾಗಿದೆ. ಜನಪರವಾದ ಕಾರ್ಯಕ್ರಮ ಮಾಡುವ ಸಿಎಂ ನಮ್ಮ ಜೊತೆ ಇದ್ದಾರೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರಿಗೆ ಅನುಕೂಲವಾಗಿದ್ದು, ಆರ್ಥಿಕವಾಗಿ ಮುಂದೆ ಸಾಗಲು ಸಹಕಾರಿಯಾಗಿದೆ. ಜಿಲ್ಲೆಯ ಸಮಸ್ಯೆ ಬಗೆಹರಿಸಲು ಸಾಕಷ್ಟು ಶ್ರಮಿಸಿದ್ದೇನೆ. ಆದರೆ ಜಿಲ್ಲೆಯಲ್ಲಿರುವ ಸ್ಥಳೀಯರೇ ಉಸ್ತುವಾರಿ ಮಂತ್ರಿಗಳಾದರೆ ಅಭಿವೃದ್ಧಿ ಇನ್ನಷ್ಟು ಸುಲಭವಾಗುವ ದೃಷ್ಟಿಯಿಂದ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆಂದು ಹೇಳಿದರು
ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೧ ವರ್ಷದ ಹಿಂದೆ ಚಂದ್ರಲೋಕದಲ್ಲಿ ನಿವೇಶನ ಕೊಡ್ತಾರಾ ಎಂಬ ಟೀಕೆ ಬಂದಿತ್ತು. ಆದರೆ ಈಗ ಹೆಮ್ಮೆಯಿಂದ ಹೇಳುತ್ತೇನೆ. ಚಂದ್ರಲೋಕದಲ್ಲಿ ಅಲ್ಲ. ತನ್ನ ಕ್ಷೇತ್ರದ ದಾರದಹಳ್ಳಿ ನಂದೀಪುರ, ತ್ರಿಪುರ, ಹಂತೂರು, ಜಾವಳಿ, ಬಿ.ಹೊಸಳ್ಳಿ, ತಳಿಹಳ್ಳಿ, ಬಸ್ಕಲ್, ಈ ೮ ಗ್ರಾ.ಪಂ. ವ್ಯಾಪ್ತಿಯಲ್ಲಿ ೨೪೨ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ಕೊಡಲು ಮುಂದಾಗಿದ್ದೇವೆ. ಮಲೆಮನೆ ಮತ್ತು ಮದುಗುಂಡಿ ನಿರಾಶ್ರಿತರಿಗೆ ಭೂಮಿ ಕೊಡುವ ಕಾರ್ಯ ಮುಗಿಸಿದರೆ ತನಗೆ ತೃಪ್ತಿ ಸಿಗುತ್ತದೆ. ಅಲ್ಲದೇ ಸಾಕಷ್ಟು ಹಳ್ಳಿಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಹಕ್ಕುಪತ್ರ ಪಡೆಯದೇ ವಂಚಿತರಾಗಿದ್ದಾರೆ.
ಅಂತವರನ್ನು ೧೮ ಹಳ್ಳಿಗಳನ್ನು ಗುರುತಿಸಿ ೯೪ಡಿ. ಯಲ್ಲಿ ಹಕ್ಕು ಪತ್ರ ನೀಡುತ್ತಿದ್ದು, ಮುಂದೆ ೫೦ಕ್ಕೂ ಅಧಿಕ ಹಳ್ಳಿಗಳಲ್ಲಿ ಗುರುತಿಸಲು ಕ್ರಮ ವಹಿಸಲಾಗಿದೆ ಎಂದ ಅವರು. ಹಿಂದೆ ಯಾವ ಶಾಸಕರಲ್ಲೂ ಈ ಕಾರ್ಯ ಸಾಧ್ಯವಾಗಿಲ್ಲ. ನಿವೇಶನ ನೀಡಲು ಕೇವಲ ಒಂದೆರಡು ದಿನದ ಶ್ರಮವಲ್ಲ. ಭೂಮಿ, ನ್ಯಾಯಾಲಯ, ಅರಣ್ಯ ಸಮಸ್ಯೆ ಸೇರಿದಂತೆ ಸಾಕಷ್ಟು ರಾಜಕೀಯ ಒತ್ತಡ ಎದುರಿಸಿ ಎರಡೂವರೆ ವರ್ಷದ ಸತತ ಪ್ರಯತ್ನ ನಡೆದಿದೆ. ಇನ್ನು ಕೆಲ ಗ್ರಾ.ಪಂ. ವ್ಯಾಪ್ತಿಗಳಲ್ಲಿ ನಿವೇಶನಕ್ಕಾಗಿ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಇದನ್ನು ಬಗೆಹರಿಸಿ ಮತ್ತಷ್ಟು ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು. ಅಲ್ಲದೇ ಕುದುರೆಮುಖ ಲೇಬರ್ ಕಾಲೋನಿಯಲ್ಲಿರುವ ಸುಮಾರು ೪೦ ಕುಟುಂಬಕ್ಕೆ ನಿವೇಶನ ಕೊಡುವ ಚಿಂತನೆ ಮಾಡಿರುವುದಾಗಿ ಹೇಳಿದರು.
ಮಾಜಿ ಸಚಿವೆ ಮೋಟಮ್ಮ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿದರು. ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿ.ಪಂ.ಸಿಇಒ ಎಚ್.ಎಸ್.ಕೀರ್ತನಾ, ಬಿ.ಎಸ್.ಜಯರಾಂಗೌಡ, ಕೆ.ವೆಂಕಟೇಶ್, ರಮೇಶ್ ಹೊಸ್ಕೆರೆ, ಜಿತೇಂದ್ರಕುಮಾರ್, ನಟೇಶ್, ವಿಜಯಕುಮಾರ್, ತಹಸೀಲ್ದಾರ್ ಎಸ್.ಅಶ್ವಿನಿ ಮತ್ತಿತರರಿದ್ದರು.
Budget emphasizes prevention of wildlife-human conflict
Leave a comment