ಕಡೂರು: ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ವೇದಾನದಿ ಯಗಟಿ ಭಾಗದಲ್ಲಿ ತುಂಬಿ ಹರಿಯುತ್ತಿದ್ದು, ಎಸ್.ಮಾದಾಪುರದ ಕೆರೆ ತುಂಬಿ ಕೋಡಿ ಬಿದ್ದಿದೆ. ಕಡೂರು ತುರುವನಹಳ್ಳಿ ಬಳಿ ರೈತರೊಬ್ಬರ ಎತ್ತು-ಗಾಡಿ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ರೈತ ಈಜಿ ಪಾರಾಗಿದ್ದಾನೆ.
ಕುಂತಿಹೊಳೆಯಲ್ಲಿ ನೀರು ಮೈದುಂಬಿ ಹರಿಯುತ್ತಿದ್ದು ಅಕ್ಕಪಕ್ಕದ ಹೊಲಗಳಿಗೆ ನೀರು ಹರಿದಿದೆ. ಬೀರೂರು ಮುದ್ದಾಪುರ ಎರೆ ಬಯಲಿನಲ್ಲಿ ಕೊಯಿಲು ಮಾಡಿದ್ದ ಈರುಳ್ಳಿಗೆ ನೀರು ನುಗ್ಗಿ ಬೆಳೆ ಕೊಳೆಯುವ ಭೀತಿ ಉಂಟಾಗಿದೆ.
ಹುಲ್ಲೇಹಳ್ಳಿಯ ಲಕ್ಷ್ಮಣ ಎನ್ನುವ ರೈತ ಅಡಿಕೆ ಸಸಿ ಖರೀದಿಸಲು ತುರುವನಹಳ್ಳಿ ಕಡೆಯಿಂದ ಕಡೂರು ಪ್ರವೇಶಿಸಲು ಮಣ್ಣುಹೊಳೆ ರಸ್ತೆಯಲ್ಲಿ ಬರುವಾಗ ಹಳ್ಳದ ಸೆಳವಿಗೆ ಎತ್ತು ಮತ್ತು ಗಾಡಿ ಕೊಚ್ಚಿಹೋಗಿ ಎತ್ತುಗಳು ಮೃತಪಟ್ಟಿವೆ. ಸಮೀಪದ ತೋಟದಲ್ಲಿ ಶವ ಪತ್ತೆಯಾಗಿದ್ದು, ಗಾಡಿ ಸಿಕ್ಕಿಲ್ಲ. ಲಕ್ಷ್ಮಣ ಈಜಿ ಪಾರಾಗಿದ್ದು ಅವರು ನೀಡಿದ ಮಾಹಿತಿಯ ಮೇಲೆ ಕಡೂರು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಎತ್ತುಗಳ ಶವ ಪತ್ತೆ ಮಾಡಿದ್ದಾರೆ.
ಯಗಟಿಯಲ್ಲಿ ಫಯಾಜ್ ಅಹಮದ್ ಎಂಬುವರ ಮನೆ, ಕಡೂರು ಹಳ್ಳಿಯಲ್ಲಿ ರುದ್ರಪ್ಪ ಮತ್ತು ನೀಲಪ್ಪ ಎಂಬುವರ ವಾಸದ ಮನೆ, ಕುಸಿದಿದೆ. ಬಸವನಹಳ್ಳಿ ಗ್ರಾಮದ ಕಮಲಿಬಾಯಿ, ಕುಮಾರ ನಾಯ್ಕ, ಪೀರ್ಯನಾಯ್ಕ, ಬಿ.ಬಸವನಹಳ್ಳಿಯ ರಮೇಶನಾಯ್ಕ್, ಲಾಲ್ಯಾ ನಾಯ್ಕ್, ಆಣೆಗೆರೆ ಗ್ರಾಮದ ದೊಡ್ಡಮ್ಮ, ಹಳೆ ಸಿದ್ದರಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಚಿಕ್ಕಬಾಸೂರು ಗ್ರಾಮದ ಗಿರೀಶ್ ಕರಿಯಪ್ಪ, ನಿಡುವಳ್ಳಿ ಗ್ರಾಮದ ಕರಿಯಪ್ಪ ಎಂಬುವರ ವಾಸದ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಹರಿದು ಬಂದ ನೀರಿನ ರಭಸಕ್ಕೆ ಯಗಟಿ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆರೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದು ಗ್ರಾಮಸ್ಥರು ಕೆರೆಯ ಮೇಲೆ ಓಡಾಡದಂತೆ ಬ್ಯಾರಿಕೇಡ್ ಹಾಕಲು ಮನವಿ ಮಾಡಿದ್ದಾರೆ.
ಎಸ್.ಮಾದಾಪುರ ಗ್ರಾಮದ ಕೆರೆ ಕೋಡಿ ಬಿದ್ದಿದೆ. ಬಿದರೆ ಕಡೆ ಹೋಗುವ ಕೋಡಿ ಮತ್ತು ಊರಿನ ಮುಂದಿನ ಕೋಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಮಲ್ಲೇಶ್ವರ ಬಳಿ ಕುಂತಿಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಅಕ್ಕಪಕ್ಕದ ಹೊಲಗಳು, ತೋಟಗಳಿಗೆ ನೀರು ಹರಿದಿದೆ. ಬೀರೂರು-ಅಜ್ಜಂಪುರ ರಸ್ತೆಯ ರಹೀಂಸಾಬ್ ಲೇಔಟ್ ಗಾಳಿಹಳ್ಳೆ ಕೆರೆ ತುಂಬಿ ಹರಿದಿದ್ದರಿಂದ ಸಂಪೂರ್ಣ ಜಲಾವೃತಗೊಂಡು 20ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಮಂಗಳವಾರ ಮಧ್ಯಾಹ್ನದವರೆಗೂ ದ್ವೀಪವಾಸಿಯಾಗಿದ್ದರು.
ಈರುಳ್ಳಿ ಬೆಳೆಯನ್ನು ಬೆಳೆದವರು ಈ ಬಾರಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದವರಿಗೆ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿಯಾಗುವುದನ್ನು ಕಾಪಾಡಿಕೊಳ್ಳುವುದೇ ಒಂದು ಸಾಹಸವಾಗಿದ್ದು ಹಲವಾರು ಕಡೆ ಜಮೀನಿನ ಮೇಲಿರುವ ಈರುಳ್ಳಿಗೆ ನೀರು ನುಗ್ಗಿದೆ. ಇನ್ನೂ ಕೆಲವರು ಜಮೀನುಗಳ ಬಳಿ ಕಟಾವು ಮಾಡಿ ಸಂಗ್ರಹಿಸಿರುವ ಈರುಳ್ಳಿ ಕೊಳೆಯುವ ಭೀತಿ ಎದುರಾಗಿದ್ದು, ಅಕಾಲಿಕ ಮಳೆ ನಮ್ಮ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ರೈತರು ತೊಳಲಾಡುತ್ತಿದ್ದಾರೆ. ಕೆಲವು ಕಡೆ ಅಡಿಕೆ ತೋಟಗಳಿಗೆ ನೀರು ನುಗ್ಗಿ ಕೊಯಿಲಿಗೆ ಅಡಚಣೆ ಉಂಟು ಮಾಡಿದೆ.
ಸೋಮವಾರ ರಾತ್ರಿವರೆಗೆ ಸಿಂಗಟಗೆರೆ 56.6, ಬೀರೂರು 45.2, ಸಖರಾಯಪಟ್ಟಣ 40.2, ಬಾಸೂರು 40, ಎಮ್ಮೆದೊಡ್ಡಿ 33.4, ಪಂಚನಹಳ್ಳಿ 24.8, ಗಿರಿಯಾಪುರ 21, ಯಗಟಿ 16.6 ಮಿ.ಮೀ ಮಳೆ ದಾಖಲಾಗಿದೆ.
A farmer’s oxcart washed away in a ditch
Leave a comment