ಚಿಕ್ಕಮಗಳೂರು : ನೀಟ್ ಪದೆಶ್ನೆ ಪತ್ರಿಕೆ ಸೋರಿಕೆ ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ವಿಧ್ಯಾರ್ಥಿ ಹೋರಾಟವನ್ನು ಬೆಂಬಲಿಸಿ ನಗರದ ಆಜಾದ್ ವೃತ್ತದಲ್ಲಿಂದು ಸಮಾನ ಮನಸ್ಕರು ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲಿತ ನಾಗರೀಕರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಕೆಪಿಸಿಸಿ ವಕ್ತಾರ ಹೆಚ್. ಹೆಚ್. ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ಶ್ರದ್ದಾಂಜಲಿ ಸಭೆ ಮಾಡಿಲ್ಲ, ಡೋಂಗಿ ಹಿಂದುತ್ವವನ್ನು ಪ್ರದರ್ಶನ ಮಾಡುತ್ತಿದ್ದಾರೆ. ನೀಟ್ ಹಗರಣದಲ್ಲಿ ಕೇಂದ್ರ ಸಚಿವರು ಸೇರಿದಂತೆ ಬಿಜೆಪಿ ಎಲ್ಲಾ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.
ಅಮಾಯಕ ೨೧ ವಿದ್ಯಾರ್ಥಿಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತವಾಗಿ ಜೀವನ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಭಾರತದ ೧೪೦ ಕೋಟಿ ಜನಸಂಖ್ಯೆ ಇರುವ ಅವರೆಲ್ಲರ ಮನೆಯಲ್ಲಿ ಮಕ್ಕಳನ್ನು ಕಳೆದು ಕೊಂಡಿದ್ದೇವೆಂಬ ಭಾವನೆ ಬರಬೇಕಾಗಿದೆ. ಇದರ ನೈತಿಕ ಹೊಣೆಯನ್ನು ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊರಬೇಕೆಂದು ಒತ್ತಾಯಿಸಿದರು.
ಜಾತಿ, ಧರ್ಮ, ಭಾವನೆ ಇಲ್ಲದ ಮಕ್ಕಳು ಬದುಕೆ ಭಾವನೆಯಾಗಿತ್ತು. ಉದ್ಯೋಗ ಪಡೆಯಬೇಕು, ರಾಜಕಾರಣಿಯಾ ಗಬೇಕು, ನ್ಯಾಯಾಧೀಶ, ವೈದ್ಯ, ಇಂಜಿನಿಯರ್ ಮುಂತಾದ ಕನಸುಗಳಿಗೆ ಧಕ್ಕೆಯಾಗಿ ಆತ್ಮಹತ್ಯೆ ದಾರಿ ಹಿಡಿದಿರುವುದು ಈ ಹಗರಣಕ್ಕೆ ಸಾಕ್ಷಿ ಯಾಗಿದೆ ಎಂದು ದೂರಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿನ್ನೆಯವರಗೆ ಮಾತನಾಡದ ವ್ಯಕ್ತಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧೀ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಬಳಿಕ ಖಂಡನೆ ಹೇಳಿಕೆ ನೀಡಿರುವುದು ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು.
ನೀಟ್ ಹಗರಣದ ಬಗ್ಗೆ ರಾಜ್ಯ ಬಿಜೆಪಿ ನಾಯಕರುಗಳಾದ ಆರ್. ಅಶೋಕ್, ಶೋಭ ಕರಂದ್ಲಾಜೆ, ಸಿ.ಟಿ. ರವಿ, ಪ್ರತಾಪ ಸಿಂಹ ಸೇರಿದಂತೆ ಮುಂತಾದ ಯಾರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಸಣ್ಣಘಟನೆಯಾದಾಗ ಬೊಬ್ಬೆ ಹೊಡೆಯುವ ನೀವು ಈ ಪ್ರಕರಣ ಒಂದರಲ್ಲಿ ಮಾತನಾಡದೆ ಮೌನವಹಿಸಿ ನಿಮ್ಮ ಧ್ವನಿಯನ್ನು ಯಾರಿಗೆ ಅಡವಿಟ್ಟಿದ್ದೀರಿ ಎಂದು ಪ್ರಶ್ನಿಸಿದರು. ನೀಟ್ ಮರು ಪರೀಕ್ಷೆಯಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುವ ಮಕ್ಕಳಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವುದರೊಂದಿಗೆ ಸಂತ್ರಸ್ಥ ಮನೆಯ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾಗ ವಿನಾಕಾರಣ ದಬ್ಬಾಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ. ಜೊತೆಗೆ ನಕಲಿ ಪೊಲೀಸರು ಮತ್ತು ಗೂಂಡಾಗಳನ್ನು ಕರೆತಂದು ಲಾಠಿ ಚಾರ್ಜ್ ಮಾಡಿ, ಹಲ್ಲೆ ನಡೆಸಿ, ಹೀನ ಸ್ಥಿತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ತಂದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಸಿಇಟಿ ಆಯಾ ರಾಜ್ಯಗಳ ಹಕ್ಕಾಗಿದ್ದು, ಅಖಿಲ ಭಾರತ ಮಟ್ಟಕ್ಕೆ ಇದನ್ನು ತಂದ ಕೇಂದ್ರ ಸರ್ಕಾರ ಬಾಬರಿ ಮಸೀದಿ, ರಾಮ ಮಂದಿರ ಕಾಣಿಕೆ ಲೂಟಿ, ಪೇಪರ್ ಮಾರಾಟ ಮಾಡಿ ಹಣ ವಂಚನೆ ಮಾಡಿದ್ದಾರೆ. ಇದರಿಂದಾಗಿ ಕಷ್ಟಪಟ್ಟು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಭ್ರಮನಿರಸನವಾಗಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ದ ಕೇಸು ಹಾಕಿ ಜೈಲಿಗೆ ಕಳಿಸಿದಾಗ ಮಾತ್ರ ನರೇಂದ್ರ ಮೋದಿ ಜನಪರವಾಗಿದ್ದಾರೆಂದು ಅರ್ಥ, ಇಲ್ಲದಿದ್ದರೆ ಲೂಟಿಕೋರರ ಪರವಾಗಿದ್ದೀರಿ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದರು.
ದೇಶದ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಆರ್ .ಎಸ್.ಎಸ್ಮುಖವಾಣಿಯಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಾಧಾನರ ರಾಜೀನಾಮೆ ಪಡೆಯಲು ಪ್ರಧಾನಿ ನರೇಂದ್ರ ಮೋದಿಗೆ ಶಕ್ತ್ತಿಯಿಲ್ಲ ಎಂದು ಲೇವಡಿ ಮಾಡಿದರು.
ಬಿ.ಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ ರಾಧಾ ಕೃಷ್ಣ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಬೇಕಿತ್ತು ಆದರೆ ಪ್ರತಿಭಟನಾ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿರುವುದು ಖಂಡನೀಯಎಂದರು.
ಕಾಂಗ್ರೆಸ್ ಮುಖಂಡ ರವೀಶ್ಬಸಪ್ಪ ಮಾತನಾಡಿ ಭಾರತದ ನಿಜವಾದ ಜೀವನ ಹಳ್ಳಿಗಳಲ್ಲಿ ಅಡಗಿದೆ. ಬುದ್ದ, ಬಸವ, ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗ ಅನುಸರಿಸುತ್ತಿಲ್ಲ. ಅಧಿಕಾರದಲ್ಲಿ ಅಹಂಕಾರ ಸೇರಿದರೆ ಅದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು.
ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕಾಯಕಕ್ಕೆ ಭಾರತ ಎಚ್ಚರವಾಗಬೇಕಿದೆ. ಅದರ ಸಂಕೇತವಾಗಿ ಚಿಕ್ಕಮಗಳೂರಿನಲ್ಲಿಂದು ಸಮಾನ ಮನಸ್ಕರು ಸೇರಿ ಪ್ರತಿಭಟನೆ ನಡೆಸುವ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆಂದರು.
ಈ ಸಂದರ್ಭದಲ್ಲಿ ಎನ್. ರಾಜು, ಹೆಚ್.ಎಂ. ರೇಣುಕಾರಾಧ್ಯ, ಕೆ. ಮಹಮದ್, ಗುರುಶಾಂತಪ್ಪ, ಮತ್ತಿತರರು ಮಾತನಾಡಿದರು. ಶ್ರೀನಿವಾಸ್ ದಂಟರಮಕ್ಕಿ, ರಮೇಶ್, ಶ್ರೀನಿವಾಸ ದೇವಾಂಗ, ಸೈಯದ್ ಹನೀಫ್, ತನೂಜ್ ನಾಯ್ಡು, ಇಂದಾವರ ಲೋಕೇಶ್, ಆನಂದ್ ಕೋಟೆ, ಶಿವರಾಂ ಮುಂತಾದವರು ಉಪಸ್ಥಿತರಿದ್ದರು.
Like-minded people protest in support of student struggle
Leave a comment