ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಟ್ನಪಾಳ್ಯ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಕಳ್ಳತನ ನಡೆಸಿ, ದೇವರ ಚಿನ್ನ-ಬೆಳ್ಳಿ ಆಭರಣಗಳು, ಸಿಸಿಟಿವಿ ಡಿವಿಆರ್ ಹಾಗೂ ಸೈರನ್ ವ್ಯವಸ್ಥೆಗೆ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಲಯದ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಈಶ್ವರನಾಯ್ಕ ಅವರು ನೀಡಿದ ದೂರಿನ ಪ್ರಕಾರ, ಜುಲೈ 21ರಂದು ಬೆಳಗಿನ ಜಾವ ಸುಮಾರು 3.45ಕ್ಕೆ ದೇವಸ್ಥಾನದ ಸೈರನ್ ಸೆನ್ಸಾರ್ ಮೊಳಗಿದೆ. ಕೂಡಲೇ ಅವರು ಹಾಗೂ ಟ್ರಸ್ಟ್ ಸದಸ್ಯರು ದೇವಸ್ಥಾನಕ್ಕೆ ಧಾವಿಸಿದಾಗ, ಹಿಂಭಾಗದ ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಒಳನುಗ್ಗಿರುವುದು ಕಂಡುಬಂದಿದೆ.
ಕಿಟಕಿಯಿಂದ ಒಳಗೆ ಪರಿಶೀಲಿಸಿದಾಗ ಗರ್ಭಗುಡಿಯ ಬಾಗಿಲು ತೆರೆದಿದ್ದು, ಉತ್ಸವ ಮೂರ್ತಿಯನ್ನು ದೇವಾಲಯದ ಸಭಾಂಗಣದಲ್ಲಿ ಇರಿಸಲಾಗಿತ್ತು. ಮೂರ್ತಿ ಹಾಗೂ ದೇವಿಯ ಮೈಮೇಲೆ ಅಲಂಕರಿಸಿದ್ದ ಚಿನ್ನ-ಬೆಳ್ಳಿ ಆಭರಣಗಳು ಕಾಣೆಯಾಗಿದ್ದವು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳ್ಳರು ಸುಮಾರು 2.5 ಕೆಜಿ ತೂಕದ ಬೆಳ್ಳಿಯ ಛತ್ರಿ, ದಾಳ, ಗಿಳಿ, ಚಕ್ರ, ತ್ರಿಶೂಲ, ಕತ್ತಿ ಹಾಗೂ ನಾಗರ ಸೇರಿದಂತೆ ವಿವಿಧ ಆಭರಣಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ, ದೇವರ ತಾಳಿ, ಮೂಗುತಿಗಳು, ಚಿನ್ನದ ಗುಂಡುಗಳು ಸೇರಿದಂತೆ ಸುಮಾರು 2 ಗ್ರಾಂ ಚಿನ್ನಾಭರಣ ಹಾಗೂ ದೇವಿಯ ಪ್ರಭಾವಳಿಯ ಮೇಲಿದ್ದ 1.35 ಕೆಜಿ ತೂಕದ ಬೆಳ್ಳಿಯ ಛತ್ರಿ, ಪತಾಕಿಗಳು, ಕವಚ ಮತ್ತು ಸುಮಾರು 42 ಗ್ರಾಂ ತೂಕದ ಚಿನ್ನದ ಮೂಗುತಿ ಹಾಗೂ ಕಣ್ಣುಗಳನ್ನೂ ಕಳವು ಮಾಡಲಾಗಿದೆ.
ಇದರೊಂದಿಗೆ ದೇವಸ್ಥಾನದಲ್ಲಿದ್ದ ಸಿಸಿಟಿವಿ ಡಿವಿಆರ್ನ್ನು ಸಹ ಕಳ್ಳರು ಕೊಂಡೊಯ್ದಿದ್ದು, ಸೈರನ್ ವ್ಯವಸ್ಥೆಯ ವೈರ್ಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾರೆ.
ಕಳುವಾದ ಬೆಳ್ಳಿಯ ಆಭರಣಗಳ ಮೌಲ್ಯ ಸುಮಾರು ₹9 ಲಕ್ಷ ಹಾಗೂ ಚಿನ್ನದ ಆಭರಣಗಳ ಮೌಲ್ಯ ₹5.72 ಲಕ್ಷ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಸುಮಾರು ₹14.72 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಸ್ತುಗಳು ಕಳುವಾಗಿವೆ.
ಈ ಸಂಬಂಧ ಈಶ್ವರನಾಯ್ಕ ಅವರ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Gold and silver ornaments worth ₹14.72 lakh stolen from Chowdeshwari temple
Leave a comment