ಚಿಕ್ಕಮಗಳೂರು : ಬಿಡದಿ ವ್ಯಾಪ್ತಿ ಪ್ರದೇಶದಲ್ಲಿ ಪ್ರಸ್ತಾವಿತ ಟೌನ್ಷಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತಕ್ಷಣ ಕೈಬಿಡುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತಾವರ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ಭೂಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ರೈತರ ವಿರುದ್ದ ದಾಖಲಿಸಿರುವ ಕೊಲೆಯತ್ನ ಪ್ರಕರಣ ಸೇರಿದಂತೆ ಎಲ್ಲಾ ಕೇಸುಗಳನ್ನು ಬೇಷರತ್ತಾಗಿ ಹಿಂಪಡೆಯಬೇಕೆಂದು ಆಗ್ರಹಿಸಿದರು.
ರೈತರ ಬದುಕು ಕೃಷಿ ಹಾಗೂ ರಾಜ್ಯದ ಆಹಾರ ಭದ್ರತೆಯನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಬಿಡದಿಯ ಪ್ರಸ್ತಾವಿತ ಟೌನ್ಷಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳುವುದರಿಂದ ಸಾವಿರಾರು ರೈತ ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರುವ ಬೆಳವಣಿಗೆಯಾಗಿದೆ. ತಲೆಮಾರುಗಳಿಂದ ಕೃಷಿಯನ್ನೇ ನಂಬಿ ಬದುಕುವ ರೈತರಿಗೆ ಭೂಮಿ ಕೇವಲ ಆಸ್ತಿಯಲ್ಲ ಅದು ಅವರ ಜೀವನೋಪಾಯ ಮತ್ತು ಮುಂದಿನ ಪೀಳಿಗೆಯ ಭದ್ರತೆಯಾಗಿದೆ ಎಂದರು.
ಈ ಭಾಗದ ರೈತರು ಪ್ರತಿನಿತ್ಯ ಬೆಂಗಳೂರು ಮಹಾನಗರಕ್ಕೆ ಅಗತ್ಯವಿರುವ ತರಕಾರಿ, ಒಪ್ಪ, ತೆಂಗಿನಕಾಯಿ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ಹಾಗೂ ಪ್ರತಿನಿತ್ಯ ಲಕ್ಷಾಂತರ ಲೀಟರ್ ಹಾಲನ್ನು ಪೂರೈಸುತ್ತಿದ್ದಾರೆ. ಟೌನ್ ಷಿಪ್ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ನಾಶ ಪಡಿಸಿದರೆ ನಾಗರೀಕರ ಆಹಾgದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ರಾಜ್ಯದ ಅಭಿವೃದ್ದಿಯನ್ನು ಕಟ್ಟಡಗಳ ಎತ್ತರದಿಂದ ಅಳೆಯುವುದಲ್ಲ. ಅನ್ನದಾತನಿಗೆ ನೀಡುವ ನ್ಯಾಯದ ಅಳತೆಯಾಗಿದೆ. ಕೃಷಿಭೂಮಿಯನ್ನು ಉಳಿಸುವುದು ಮತ್ತು ರೈತರ ಗೌರವ ಕಾಪಾಡುವುದು ಅಭಿವೃದ್ದಿಗಿಂತ ದೊಡ್ಡ ಜವಾಬ್ದಾರಿಯಾಗಿದೆ ಎಂದ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನ್ಯಾಯ ಸಮ್ಮತ ಹಾಗೂ ಜನಪರ ನಿರ್ಧಾರ ಕೈಗೊಂಡು ರೈತ ಸಮುದಾಯದ ವಿಶ್ವಾಸ ಉಳಿಸುವಂತೆ ಮನವಿ ಮಾಡಿದರು.
ರೈತರ ಬುದುಕು ಕೃಷಿ ಮತ್ತು ರಾಜ್ಯದ ಆಹಾರ ಭದ್ರತೆಯನ್ನು ಕಾಪಾಡುವ ಐತಿಹಾಸಿಕ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ, ಮುಖಂಡರುಗಳಾದ ಸ್ವಾಗತ್, ಅವಿನ್, ಪ್ರಮೊದ್ ಎಂ.ಕೆ., ಉಲ್ಲಾಸ್ ಗೌಡ, ನಕುಲ್ ಪ್ರಧಾನ್, ಸುನಿಲ್, ತನುಷ್, ದರ್ಶನ್, ರಕ್ಷಿತ್, ಉದಯ್ ಉಪಸ್ಥಿತರಿದ್ದರು.
Kisan Sangh demands abandonment of Bidadi land acquisition process
Leave a comment