ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಮ್ ಮಾತನಾಡಿ, ಕಂದಾಯ ಭೂಮಿ, ಅರಣ್ಯ ಭೂಮಿಯ ಮತ್ತು ನಮೂನೆ ೫೦, ೫೩ರ ಭೂ ಮಂಜೂರಾತಿಯಲ್ಲಿನ ಹಗರಣದಲ್ಲಿ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ೫ಗುಂಟೆ, ೧೦ಗುಂಟೆ ಸೇರಿದಂತೆ ಅತ್ಯಂತ ಕಡಿಮೆ ಭೂಮಿಯನ್ನು ಅನಧಿಕೃತ ಸಾಗುವಳಿ ಮಾಡಿರುವ ಸಾಕಷ್ಟು ಬಡ ರೈತರ ಅರ್ಜಿಗಳನ್ನು ಸರಕಾರ ವಜಾ ಮಾಡಿರುವುದರಿಂದ ಬಡ ರೈತರಿಗೆ ತೊಂದರೆಯಾಗಿದೆ ಎಂದರು, ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಡಿಕೆಶಿ, ಸಭೆಯೊಂದರಲ್ಲಿ ಪಾಲ್ಗೊಂಡು ಸಲಹೆ ನೀಡಲು ಅವಕಾಶ ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.
ಪಟ್ಟಣ ಪಂಚಾಯಿತಿ,ಪುರಸಭೆ, ನಗರಸಭೆ ಪರಿಮಿತಿಯಿಂದ ೩ -೫ ಕಿ.ಮೀ ಭಾಗದ ಜಮೀನುಗಳನ್ನು ನಗರಸಭೆ,ಪುರಸಭೆ ,ಪಟ್ಟಣ ಪಂಚಾಯತಿ ವ್ಯಾಪ್ತಿ ಪರಿಮಿತಿಗೆ ಹೊಂದಿಕೊಂಡಿರುವ ಗ್ರಾಮಾಂತರ ಭಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ಲಾಂಟೇಶನ್ ಮತ್ತು ಇತರ ಬೆಳೆಗಳ ಜಮೀನುಗಳನ್ನು ಬಫರ್ ಜೋನ್ ವ್ಯಾಪ್ತಿಯಿಂದ ಹೊರಗಿಡುವಂತೆಯೂ ಈ ವೇಳೆ ಜಯರಾಮ್ ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್ ಮಾತನಾಡಿ, ತುಂಡುಭೂಮಿ ಕಾನೂನು ಕಾಯ್ದೆ ವಾಪಸ್ ಪಡೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ, ಐದು ಕಾಲು ಗುಂಟೆ ಜಮೀನನ್ನು ಮಾತ್ರ ರಿಜಿಸ್ಟರ್ ಮಾಡಲು ಸರ್ಕಾರದಿಂದ ಕಾನೂನು ತಿದ್ದುಪಡಿ ಮಾಡಿದ್ದು, ಇದರಿಂದ ಮನೆ ಕಟ್ಟಿಕೊಳ್ಳಲು ಒಂದು ಗುಂಟೆ, ಎರೆಡು ಗುಂಟೆ ಭೂಮಿ ಖರೀದಿ ಮಾಡಲು ಇಚ್ಛಿಸುವ ನಿವೇಶನ ರಹಿತರಿಗೆ ಅನಾನುಕೂಲವಾಗುತ್ತಿದೆ. ಈ ಕಾಯ್ದೆಗೆ ತಿದ್ದುಪಡಿ ತಂದು ಬಡವರಿಗೆ ಅನುಕೂಲವಾಗುವ ಕಾನೂನು ರೂಪಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಂದಾಯ ಸಚಿವರು ಹಾಗೂ ಬೆಳೆಗಾರರ ಸಂಘಟನೆಗಳನ್ನು ಕರೆದು ಮುಂದಿನ ಮಂತ್ರಿ ಮಂಡಲ ಪುನರ್ ರಚನೆಯಾದ ನಂತರ ದಿನಾಂಕವನ್ನು ನಿಗದಿಪಡಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಇದೇ ವೇಳೆ ನಿಯೋಗವು ನೂತನವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ಕೆ.ಹರಿಪ್ರಸಾದ್ ಅವರನ್ನೂ ಗೌರವಿಸಿ ಅಭಿನಂದಿಸಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯನವರು, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಹಾಲಪ್ಪಗೌಡ, ಮನು ರವರು, ಉದಯಶಂಕರ್ ಸುರೇಂದ್ರರವರು, ಸಿ.ಕೆ.ಇಬ್ರಾಹಿಂ ಮತ್ತಿತರ ಮುಖಂಡರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
Appeal to resolve coffee growers’ problems
Leave a comment