ಚಿಕ್ಕಮಗಳೂರು: ಬೀರೂರು ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಮೂವರು ನಾಗರಿಕರು ನಾಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ನಾಪತ್ತೆಯಾದವರ ಪತ್ತೆಗಾಗಿ ಪೊಲೀಸರು ಹಾಗೂ ಕುಟುಂಬದವರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ 77 ವರ್ಷದ ವೃದ್ಧ ನಾಪತ್ತೆ:
ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಪ್ಪ (77 ವರ್ಷ) ಎಂಬ ವೃದ್ಧರೊಬ್ಬರು ಕಾಣೆಯಾಗಿದ್ದಾರೆ. ಈ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಇವರಿಗೆ ಶಿವಮೊಗ್ಗದ ಚಂದ್ರಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಎಂದಿನಂತೆ ವಾಕಿಂಗ್ ಮುಗಿಸಿಕೊಂಡು ಬರುತ್ತಾರೆಂದು ಕಾಯುತ್ತಿದ್ದ ಕುಟುಂಬಸ್ಥರಿಗೆ ರಾತ್ರಿಯಾದರೂ ಇವರು ಮನೆಗೆ ಮರಳಿ ಬಾರದೇ ಇದ್ದಾಗ ಆತಂಕ ಶುರುವಾಗಿದೆ. ಸುತ್ತಮುತ್ತಲಿನ ಹಳ್ಳಿಗಳು ಹಾಗೂ ರಕ್ತಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಕಾಣೆಯಾದ ತಂದೆಯನ್ನು ಹುಡುಕಿಕೊಡುವಂತೆ ಮಗ ಬೀರೂರು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.
ಮನೆ ಕೆಲಸ ಮುಗಿಸಿಹೆಂಡತಿ ನಾಪತ್ತೆ:
ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಡೇವಾ ಗ್ರಾಮದ ನಿವಾಸಿ ಹೇಮಾವತಿ ಕೆ.ಟಿ. (34 ವರ್ಷ) ಎಂಬ ಗೃಹಿಣಿ ಮನೆಯಿಂದ ಯಾರಿಗೂ ಹೇಳದೆ ಕೇಳದೆ ನಾಪತ್ತೆಯಾಗಿದ್ದಾರೆ. ಸುಮಾರು 18 ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ 15 ವರ್ಷದ ಮಗಳು ಹಾಗೂ 13 ವರ್ಷದ ಮಗನಿದ್ದಾನೆ. ಅನ್ನೋನ್ಯವಾಗಿದ್ದ ಸಂಸಾರದಲ್ಲಿ ಜೂನ್ 2 ರಂದು ಮಧ್ಯಾಹ್ನ ಪತಿ ಟಿವಿ ನೋಡುತ್ತಾ ಮಲಗಿದ್ದ ಸಮಯದಲ್ಲಿ ಮನೆ ಕೆಲಸ ಮುಗಿಸಿ ಹೋದ ಹೇಮಾವತಿ ರಾತ್ರಿಯಾದರೂ ಮನೆಗೆ ಬಂದಿಲ್ಲ. ತರೀಕೆರೆ, ಲಿಂಗದಹಳ್ಳಿ ಸುತ್ತಮುತ್ತ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಕಾರಣ ಪತಿ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಗುವನ್ನು ತಾಯಿಯ ಬಳಿ ಬಿಟ್ಟು ಹೋದ ಯುವತಿ:
ಕಡೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಮ್ಮ ಎಂಬುವರ ಮಗಳು ಸಿಂಚನ (20 ವರ್ಷ) ನಾಪತ್ತೆಯಾಗಿರುವ ಮತ್ತೊಂದು ಪ್ರಕರಣ ಲಿಂಗದಹಳ್ಳಿ ಠಾಣೆಯಲ್ಲಿ ದಾಖಲಾಗಿದೆ. ಎರಡು ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಮಂಜು ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ ಸಿಂಚನಾಗೆ ಒಂದು ವರ್ಷದ ಗಂಡು ಮಗುವಿದೆ. ಕಳೆದ ಮೂರು ತಿಂಗಳಿನಿಂದ ತಾಯಿ ಮನೆಯಲ್ಲಿದ್ದ ಆಕೆ, ಮೇ 25 ರಂದು ಬೆಳಗ್ಗೆ ಗಂಡನ ಮನೆಗೆ ಹೋಗಿ ಬರುವುದಾಗಿ ಹೇಳಿ, ಮಗುವನ್ನು ತಾಯಿಯ ಬಳಿ ಬಿಟ್ಟು ಹೋಗಿದ್ದಾರೆ.
ಆದರೆ ಸಂಜೆ ವೇಳೆಗೆ ಪತಿ ಮಂಜುಗೆ ಕರೆ ಮಾಡಿ ವಿಚಾರಿಸಿದಾಗ ಆಕೆ ಅಲ್ಲಿಗೂ ತಲುಪಿಲ್ಲ ಎಂಬ ಆಘಾತಕಾರಿ ವಿಷಯ ತಿಳಿದುಬಂದಿದೆ. ತಾಯಿ ಮತ್ತು ಗಂಡ ಇಬ್ಬರೂ ಸೇರಿ ಬೆಂಗಳೂರು, ತುಮಕೂರು, ಕಡೂರು, ಅರಸೀಕೆರೆ ಸೇರಿದಂತೆ ಪ್ರಮುಖ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಹುಡುಕಾಡಿದರೂ ಯುವತಿಯ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಲಿಂಗದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Increased number of missing cases in the district
Leave a comment