ಚಿಕ್ಕಮಗಳೂರು: ದಲಿತ ಮಹಿಳೆಯೊಬ್ಬರ ಪಿತ್ರಾರ್ಜಿತ ಜಮೀನಿನ ಬೇಲಿ ಕತ್ತರಿಸಿ, ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿರುವ ಗಂಭೀರ ಅಪರಾಧ ಪ್ರಕರಣವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಮೇದರಬೀದಿ ನಿವಾಸಿಯಾದ ವೆಂಕಟಮ್ಮ (65) ಎಂಬುವವರು ದೌರ್ಜನ್ಯಕ್ಕೊಳಗಾದ ವೃದ್ದೆ. ಇವರಿಗೆ ಮತ್ತು ಇವರ ಸಹೋದರಿಯರಿಗೆ ದೋಣಗುಡಿಗೆ ಗ್ರಾಮದ ಸರ್ವೆ ನಂಬರ್ 86ರಲ್ಲಿ 2 ಎಕರೆ 38 ಗುಂಟೆ ಪಿತ್ರಾರ್ಜಿತ ಜಂಟಿ ಖಾತೆ ಜಮೀನಿದೆ.
ಆದರೆ, ಇದೇ ದೋಣಗುಡಿಗೆ ಗ್ರಾಮದ ಸವರ್ಣೀಯ ಜಾತಿಗೆ ಸೇರಿದ ಡಿ. ಚಂದ್ರೇಗೌಡ, ಡಿ. ಮರಿಸಿದ್ದೇಗೌಡ ಹಾಗೂ ಈತನ ಮಗ ಭವಿತ್ ಎಂಬುವವರು ಮೇ 20ರಂದು ಬುಧವಾರ ತೋಟದ ಬೇಲಿಯ ಮೆಸ್ಸನ್ನು ದೌರ್ಜನ್ಯದಿಂದ ಕತ್ತರಿಸಿ ಹಾಕಿದ್ದಾರೆ.
ಈ ಅಕ್ರಮವನ್ನು ಪ್ರಶ್ನಿಸಲು ಹೋದ ವೆಂಕಟಮ್ಮ ಅವರಿಗೆ ಚಂದ್ರೇಗೌಡನ ಕುಮ್ಮಕ್ಕಿನಿಂದ ಮರಿಸಿದ್ದೇಗೌಡ ಮತ್ತು ಭವಿತ್ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಲ್ಲದೆ, “ಎಸ್ಸಿ ಎಸ್ಟಿ ಜಾತಿಗೆ ಸೇರಿದ ನೀನು ಏನು ಮಾಡುತ್ತೀಯಾ?” ಎಂದು ಜಾತಿ ಹಿಡಿದು ನಿಂದನೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ವೃದ್ಧೆಯ ಮೇಲೆ ಕೈಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.
“ಊರಿಂದ ಊರು ಬಿಟ್ಟು ಬಂದು ಜಮೀನು ಮಾಡುತ್ತೀರಾ, ನಿಮ್ಮನ್ನು ಬದುಕಲು ಬಿಡುವುದಿಲ್ಲ, ತೋಟದಲ್ಲಿ ಹೇಗೆ ಇರುತ್ತೀರಿ ಎಂದು ನೋಡುತ್ತೇನೆ” ಎಂಬುದಾಗಿ ಮರಿಸಿದ್ದೇಗೌಡ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾಗಿದ್ದ ವೃದ್ದೆ ವೆಂಕಟಮ್ಮ, ತದನಂತರ ಮನೆಯ ಹಿರಿಯರು ಹಾಗೂ ನೆಂಟರಿಷ್ಟರ ಸಲಹೆ ಪಡೆದು ತಡವಾಗಿ ಆಲ್ಲೂರು ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ.
ಸದ್ಯ ಆಲ್ಲೂರು ಪೊಲೀಸರು ಆರೋಪಿಗಳಾದ ಚಂದ್ರೇಗೌಡ, ಮರಿಸಿದ್ದೇಗೌಡ ಮತ್ತು ಭವಿತ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿರುವ ದೂರನ್ನು ಸ್ವೀಕರಿಸಿ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Dalit woman assaulted in Allur
Leave a comment