ಚಿಕ್ಕಮಗಳೂರು: ಕಂದಾಯ ಮತ್ತು ಅರಣ್ಯ ಇಲಾಖೆ ಭೂಮಿ ಸಮಸ್ಯೆ ಶೀಘ್ರ ಪರಿಹರಿಸುವಂತೆ ಒತ್ತಾಯಿಸಿ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟ, ವಿವಿಧ ಬೆಳೆಗಾರರ ಸಂಘಟನೆಗಳು, ದಲಿತ, ಕನ್ನಡ, ರೈತ ಸಂಘಟನೆಗಳ ನೇತೃತ್ವದಲ್ಲಿ ನಗರದ ತಾಲ್ಲೂಕು ಕಚೇರಿ ಎದುರು ಜಮಾಯಿಸಿದ್ದ ಸಾವಿರಾರು ರೈತರು, ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ಸಾಮೂಹಿಕ ಘೋಷಣೆ ಮೊಳಗಿಸಿದರು.
ಷನಾಗರಿಕ ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಎಸ್. ವಿಜಯಕುಮಾರ್ ಮಾತನಾಡಿ, ‘ಜಂಟಿ ಸರ್ವೆಯಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಾಕಿ ಇರುವ ಆಶ್ರಯ ನಿವೇಶನದ ಕಡತಗಳ ಪ್ರಕ್ರಿಯೆ ಅಂತಿಮಗೊಳಿಸಿ ಬಡವರಿಗೆ ನಿವೇಶನ ನೀಡಬೇಕು’ ಎಂದು ಆಗ್ರಹಿಸಿದರು.
‘ಈಗಾಗಲೇ ಪರಿಭಾವಿತ ಅರಣ್ಯ ವಿಷಯದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಜನವಸತಿ, ಶಾಲೆ, ಆಟದ ಮೈದಾನ, ಆಸ್ಪತ್ರೆ ಸೇರಿ ಜನ ಬಳಸುತ್ತಿರುವ ಸ್ಥಳಗಳಿದ್ದರೆ ಅವುಗಳನ್ನು ಪರಿಭಾವಿತ ಅರಣ್ಯ ಪಟ್ಟಿಯಿಂದ ಕೈಬಿಡಬೇಕು. ಈ ಸಂಬಂಧ ಎಸ್ಐಟಿ ರಚನೆಯಾಗಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ’ ಎಂದರು.
ಜನ, ಜನವಸತಿ ಮತ್ತು ರೈತರ ಭೂಮಿಯನ್ನು ತರಾತುರಿಯಲ್ಲಿ ಡೀಮ್ಸ್ ಅರಣ್ಯ ಪಟ್ಟಿ ಮಾಡಿ ಸುಪ್ರೀಂ ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸುವ ಅಪಾಯಗಳು ಹೆಚ್ಚಿವೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸಮರ್ಪಕವಾದ ಸರ್ವೆ ಕಾರ್ಯ ನಡೆಸಬೇಕು. ಜನವಸತಿ, ಶಾಲೆ, ಆಸ್ಪತ್ರೆ, ಅಂಗನವಾಡಿ, ಸ್ಮಶಾನ ಮತ್ತಿತರೆ ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಕಾಯ್ದಿರಿಸಬೇಕು. ಉಳಿದ ಜಾಗವನ್ನು ಬೇಕಿದ್ದರೆ ಪರಿಭಾವಿತ ಅರಣ್ಯಕ್ಕೆ ಸೇರಿಸಿಕೊಳ್ಳಲಿ ಎಂದು ಹೇಳಿದರು.
ಸೆಕ್ಷನ್ 4 ಘೋಷಣೆ ಮಾಡಿರುವ ಜಾಗಗಳ ಗೊಂದಲ ಇತ್ಯರ್ಥಕ್ಕೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿ (ಎಫ್ಎಸ್ಒ) ನೇಮಿಸಲಾಗಿದೆ. ಅವರು ನಿರ್ಧಾರ ಕೈಗೊಂಡು ಅಧಿಸೂಚನೆ ಹೊರಡಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಡತ ಸಲ್ಲಿಸಿದ್ದಾರೆ. ಆದರೆ, 5 ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆ ಯಥಾಸ್ಥಿತಿಯಲ್ಲಿ ಇರುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಸಂಚಾಲಕ ಕೆ.ಕೆ. ರಘು, ಮಹೇಶ್ ಕೆರೆಮಕ್ಕಿ, ಲೋಕೇಶ್, ಕುಮಾರಸ್ವಾಮಿ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಅಲ್ಲೂರು ಸುರೇಶ್, ರತೀಶ್, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ. ರಾಜೇಗೌಡ ಭಾಗವಹಿಸಿದ್ದರು. ತಹಶೀಲ್ದಾರ್ ರೇಷ್ಮಾ ಶೆಟ್ಟಿ ಅವರಿಗೆ ಮುಖಂಡರು ಮನವಿ ಸಲ್ಲಿಸಿದರು.
Revenue-Forest Department holds protest demanding resolution of land issue
Leave a comment