ಚಿಕ್ಕಮಗಳೂರು: ವೀಸಾ ಒದಗಿಸಲು ವಿಫಲವಾದ ಪ್ರಯಾಣ ಸೇವೆಗಳ ಪ್ರತಿನಿಧಿ ಸಂಸ್ಥೆ(ಟ್ರಾವೆಲ್ ಏಜೆನ್ಸಿ)ಯು ಪೂರ್ಣ ಹಣ ಹಿಂದಿರುಗಿಸದೆ ಸೇವಾ ನ್ಯೂನತೆ ಎಸಗಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಬಾಕಿ ಹಣ ಪಾವತಿಸುವಂತೆ ಸಂಸ್ಥೆಗೆ ಸೂಚಿಸಿದೆ.
ಚಿಕ್ಕಮಗಳೂರು ತಾಲ್ಲೂಕು ಆವತಿ ಗ್ರಾಮದ ಎ.ಪಿ.ರಾಜಾರಾಮ್ ಎಂಬುವರು ತಮ್ಮ ಕುಟುಂಬದೊಂದಿಗೆ ಜಪಾನ್ ಪ್ರವಾಸ ಕೈಗೊಳ್ಳಲು ವೀಸಾ ಮತ್ತು ಟಿಕೆಟ್ ವ್ಯವಸ್ಥೆ ಮಾಡುವಂತೆ ಕೋರಿ ಬೆಂಗಳೂರು ಬಸವನಗುಡಿಯ ಫ್ಲೈಟ್ ಶಾಪ್ಗೆ ೨,೩೪,೫೦೦ ರೂ.ಗಳನ್ನು ನೀಡಿದ್ದರು.
ಆದರೆ ಫ್ಲೈಟ್ ಶಾಪ್ ವೀಸಾ ಒದಗಿಸಲು ವಿಫಲವಾಯಿತು ಎನ್ನಲಾಗಿದೆ. ಹಣ ಪಾವತಿಸುವ ಸಂದರ್ಭ ೧,೫೨,೫೦೦ ರೂ.ಗಳನ್ನು ಮಾತ್ರ ದೂರುದಾರರ ಖಾತೆಗೆ ವರ್ಗಾಯಿಸಿತ್ತು. ಮಿಕ್ಕ ೮೨ ಸಾವಿರ ರೂ.ಗಳನ್ನು ನೀಡುವಂತೆ ಕೋರಿದರೂ ಪಾವತಿಸದೆ ಫ್ಲೈಟ್ ಶಾಪ್ ಸೇವಾ ನ್ಯೂನತೆ ಎಸಗಿತೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜಾರಾಮ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಫ್ಲೈಟ್ ಶಾಪ್ ವಿರುದ್ಧ ಜನವರಿ ೨೨ ರಂದು ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಮಾರ್ಚ್ ೨೭ ರಂದು ತೀರ್ಪು ನೀಡಿದ್ದು, ಪಾವತಿಸದೆ ಏಜೆನ್ಸಿಯು ಬಾಕಿ ಉಳಿಸಿಕೊಂಡಿದ್ದ ೮೨ ಸಾವಿರ ರೂ.ಗಳನ್ನು ಕಳೆದ ವರ್ಷದ ಮಾರ್ಚ್ ೩ ರಿಂದ ಇದುವರೆಗೆ ವಾರ್ಷಿಕ ಶೇ.೯ರ ದರದ ಬಡ್ಡಿ ಸಹಿತ ದೂರುದಾರರಿಗೆ ನೀಡುವಂತೆ ಸೂಚಿಸಿದೆ.
ಅಲ್ಲದೆ, ಪರಿಹಾರವಾಗಿ ೧೦ ಸಾವಿರ ರೂ. ಹಾಗೂ ಖರ್ಚು-ವೆಚ್ಚವೆಂದು ೫ ಸಾವಿರ ರೂ.ಗಳನ್ನು ರಾಜಾರಾಮ್ ಅವರಿಗೆ ನೀಡುವಂತೆ ಆದೇಶಿಸಲಾಗಿದೆ. ಈ ತೀರ್ಪನ್ನು ಮುಂದಿನ ೪೫ ದಿನಗಳ ಒಳಗೆ ಪಾಲಿಸಬೇಕಾಗಿದ್ದು, ತಪ್ಪಿದಲ್ಲಿ ಸೂಚಿಸಿದ ಮೊತ್ತವನ್ನು ಪಾವತಿಸುವವರೆಗೂ ಶೇ.೬ರ ಬಡ್ಡಿಯನ್ನು ಪಾವತಿಸುವಂತೆ ತಿಳಿಸಲಾಗಿದೆ.
ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ, ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರು ಈ ಆದೇಶವನ್ನು ನೀಡಿದ್ದು, ಎದುರುದಾರರು ಸೇವಾ ನ್ಯೂನತೆ ಎಸಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಜಿ.ಆರ್.ಶ್ರವಣ್ ಅವರು ವಾದ ಮಂಡಿಸಿದ್ದರು.
Consumer Disputes Redressal Forum orders travel agency to pay dues
Leave a comment