ಚಿಕ್ಕಮಗಳೂರು: ನಗರದ ಆದಿಚುಂಚನಗಿರಿ ಮಹಾ ವಿದ್ಯಾಲಯದಲ್ಲಿ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಎಮರ್ಜಿಂಗ್ ರಿಸರ್ಚ್ ಇನ್ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಅಂಡ್ ಮಷಿನ್ ಇನ್ಫಾರ್ಮ್ಯಾಟಿಕ್ಸ್ ಎಂಬ ಅಂತರಾಷ್ಟ್ರೀಯ ಸಮ್ಮೇಳನವನ್ನು ಏ.೯ ಮತ್ತು ೧೦ ರಂದು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೌತಮ್ ಎಂ.ಎ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲೆಕ್ಟ್ರಾನಿಕ್ಸ್ ಅಂಡ್ ಕಮಿನಿಕೇಷನ್ ಬೆಂಗಳೂರು ಹಾಗೂ ಕಂಪ್ಯೂಟೇಷನಲ್ ಇಂಟೆಲಿಜೆನ್ಸ್ ಸೊಸೈಟಿ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದು, ಬಾಲಗಂಗಾಧರನಾಥ ಸ್ವಾಮಿಗಳ ದಿವ್ಯಾಶೀರ್ವಾದ, ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶೃಂಗೇರಿ ಗುಣನಾಥ ಸ್ವಾಮಿಗಳ ಸಹಕಾರದೊಂದಿಗೆ ನಡೆಯಲಿದೆ ಎಂದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ. ಚೆಂಗಪ್ಪ ಮುಂಜಂದಿರ, ಡಾ. ಸುಮನಾ ಮರದಿತ್ಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆಂದು ಹೇಳಿದರು.
ಈ ಸಮ್ಮೇಳನದಲ್ಲಿ ಸಂಶೋಧಕರು, ಶಿಕ್ಷಕರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್, ಇನ್ಫಾರ್ಮ್ಯಾಟಿಕ್ಸ್ ಮತ್ತು ಮಷಿನ್ ಇಂಟೆಲಿಜೆನ್ಸ್ ಈ ಮೂರು ಉದಯೋನ್ಮುಖ ಕ್ಷೇತ್ರಗಳಲ್ಲಿ ನವೀನ ವಿಚಾರಗಳು ಮತ್ತು ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ದೇಶ ಮತ್ತು ವಿದೇಶಗಳಿಂದ ೫೪೪ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಬಂದಿದ್ದು, ಪ್ರಬಂಧಗಳ ಆಯ್ಕೆ ಪ್ರಕ್ರಿಯೆಗಳನ್ನು ಸಿಎಂಟಿ ಮೂಲಕ ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸಿದ್ದು, ಮೌಲ್ಯಮಾಪನದ ನ್ಯಾಯತೆ ಮತ್ತು ಗುಣಮಟ್ಟವನ್ನು ಕಾಪಾಡಲು ಡಬಲ್ ಬ್ಲೈಂಡ್ ಪೀರ್ ರಿವ್ಯೂ ವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ. ವಿವರವಾದ ವಿಮರ್ಶೆಗೆ ಒಳಪಡಿಸಿ ೧೪೧ ಉತ್ತಮ ಗುಣಮಟ್ಟದ ಪ್ರಬಂಧವನ್ನು ಪ್ರಸ್ತುತಿಗೆ ಆಯ್ಕೆಮಾಡಲಾಗಿದ್ದು, ಈ ಪ್ರಕ್ರಿಯೆಯಲ್ಲಿ ತಜ್ಞ ವಿಮರ್ಶಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಈ ಸಮ್ಮೇಳನವು ಉನ್ನತ ಮಟ್ಟದ ಸಂಶೋಧನೆ ಮತ್ತು ನವೀನತೆ ಉತ್ತೇಜನ ನೀಡುವುದರ ಜೊತೆಗೆ ಶಿಕ್ಷಣ ಮತ್ತು ಉದ್ಯಮಗಳ ನಡುವಿನ ಸಹಕಾರವನ್ನು ಬಲಪಡಿಸುತ್ತದೆ. ಜ್ಞಾನ ಹಂಚಿಕೆ, ನೆಟ್ವರ್ಕಿಂಗ್ ವೇದಿಕೆ ಆಗುವುದರ ಮೂಲಕ ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಜೊತೆಗೆ ಜಾಗತಿಕ ತಾಂತ್ರಿಕ ಸಂಶೋಧನೆಯಲ್ಲಿ ಭಾರತ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾಧ್ಯಕ್ಷರಾದ ಡಾ. ಸುಮ, ಪ್ರಕಾಶನ ಅಧ್ಯಕ್ಷ ಡಾ. ಅನಿಲ್ಕುಮಾರ್, ಪ್ರಾಧ್ಯಾಪಕರಾದ ಸಂಗಾರೆಡ್ಡಿ ಕುರ್ತಕೋಟಿ, ಮುಧುಪ್ರಕಾಶ್ ಉಪಸ್ಥಿತರಿದ್ದರು.
International conference at Adichunchanagiri Maha Vidyalaya from 9th April
Leave a comment