ಎನ್.ಆರ್ ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯು ತೀವ್ರ ಗದ್ದಲ ಮತ್ತು ವಾಗ್ವಾದಕ್ಕೆ ಸಾಕ್ಷಿಯಾಯಿತು.
ಕಾಡುಪ್ರಾಣಿ ಮಾನವ ಸಂಘರ್ಷ, ಬೆಳೆ ಹಾಗೂ ಜೀವ ಹಾನಿ ಮತ್ತು ಪರಿಹಾರದ ಕುರಿತು ಸಚಿವ ಈಶ್ವರ ಖಂಡ್ರೆ ಅವರು ರೈತರು ಹಾಗೂ ಬೆಳೆಗಾರರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಸಚಿವರು, ಸೆಕ್ಷನ್ 4 ವಿಚಾರ ರಾತ್ರೋರಾತ್ರಿ ಪರಿಹಾರ ಕಂಡುಕೊಳ್ಳುವುದು ಕಷ್ಟ ಎಂದು ಹೇಳಿಕೆ ನೀಡಿದರು.
ಈ ಮಾತಿನಿಂದ ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತ ಅಂಬ್ಲೂರು ರಾಮಕೃಷ್ಣ ಜವಾಬ್ದಾರಿಯುತ ಸಚಿವರಾಗಿ ನೀವು ಇಂತಹ ಮಾತುಗಳನ್ನು ಹೇಳುವುದು ಸರಿಯಲ್ಲ ಎಂದು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು.
ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದ ಅಂಬೂರು ರಾಮಕೃಷ್ಣ ಅವರ ವಿರುದ್ಧ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕ ರಾಜೇಗೌಡ ತೀವ್ರ ಆಕ್ರೋಶ ಹೊರಹಾಕಿದರು. ನಿಮ್ಮ ಸರ್ಕಾರ ಮತ್ತು ಸಚಿವರು ಅಧಿಕಾರದಲ್ಲಿದ್ದಾಗ ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸುವ ಮೂಲಕ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಈ ವಾಗ್ವಾದದಿಂದಾಗಿ ಸಂವಾದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಎಎಸ್ಪಿ ಜಯಕುಮಾರ್ ಮತ್ತು ಅಲ್ಲಿದ್ದ ರೈತರು ಅಂಬೂರು ರಾಮಕೃಷ್ಣ ಅವರನ್ನು ಸಮಾಧಾನಪಡಿಸಿ ಗದ್ದಲವನ್ನು ತಣ್ಣಗಾಗಿಸಿದರು. ಅಂತಿಮವಾಗಿ ಗೊಂದಲದ ನಡುವೆಯೇ ಸಂವಾದ ಪುನಃ ಮುಂದುವರಿಯಿತು.
Forest Minister’s speech disrupted at meeting in Balehonnur
Leave a comment