ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಅವರನ್ನು ಸೋಮವಾರ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕಡೂರು ತಾಲೂಕಿನ ಮದಗದ ಕೆರೆಯ ಚಾನಲ್ ದುರಸ್ತಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ, ಆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚಾನಲ್ಲಿನ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ, ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ದೂರಿದರು.
ಚಾನಲ್ಲಿನ ಒಳಗೆ ಮತ್ತು ಪಕ್ಕದಲ್ಲಿ ಬಾರೀ ಗಾತ್ರದ ಮರಗಳಿದ್ದು ಅವುಗಳನ್ನು ತೆರೆವುಗೊಳಿಸದೆ ಮರದ ಬುಡಗಳಿಗೇ ಜಲ್ಲಿ, ಸಿಮೆಂಟ್, ಕಾಂಕ್ರೀಟ್ ಹಾಕಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು ಮುಂದೆ ಆ ಮರದ ಬೇರುಗಳು ಬೆಳೆದಂತೆ ಕಾಲುವೆಯಲ್ಲಿ ಬಿರುಕುಂಟಾಗುತ್ತದೆ, ಕ್ರಮೇಣ ಚಾನಲ್ ಒಡೆದು ಹೋಗುತ್ತದೆ, ಇದರಿಂದಾಗಿ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಕಾಲುವೆ ಒಳಗೆ ಮತ್ತು ಪಕ್ಕದಲ್ಲಿರುವ ಮರಗಳನ್ನು ತೆರವುಗೊಳಿಸಿ ನಂತರ ಕಾಮಗಾರಿಯನ್ನು ಮಾಡುವಂತೆ ಸಂಬಂಧ ಪಟ್ಟವರಿಗೆ ಆದೇಶಿಸಬೇಕು, ಕಳಪೆ ಕಾಮಗಾರಿ ಮುಂದುವರೆದಲ್ಲಿ ಕಾಮಗಾರಿಯ ಬಿಲ್ ಅನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ ಪದಾಧಿಕಾರಿಗಳು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮು ನಾಯಕ್, ಜಿಲ್ಲಾಧ್ಯಕ್ಷ ಪಿ.ಕುಮಾರ್, ಪದಾಧಿಕಾರಿಗಳಾದ ಶಶಿ, ರವಿ, ಭಾಷಾ ಹಾಜರಿದ್ದರು.
District administration urged to prevent shoddy work
Leave a comment