ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಒಂದೇ ವಾರದಲ್ಲೇ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ರಕ್ತದಾಹ ತೀರದಾಗಿದೆ. ಒಂದೇ ವಾರದಲ್ಲಿ ಇಬ್ಬರನ್ನು ಬಲಿಪಡೆದ ನರಹಂತಕ ಆನೆಯ ಅಟ್ಟಹಾಸಕ್ಕೆ ಮಲೆನಾಡು ನಲುಗಿಹೋಗಿದೆ.
ಇಂದು ಬೆಳಿಗ್ಗೆ ಹಾವೇರಿ ಮೂಲದ ಬೋರಮ್ಮ ಎಂಬ ಕೂಲಿ ಕಾರ್ಮಿಕ ಮಹಿಳೆಯನ್ನು ಆನೆ ಬಲಿಪಡೆದ ಬೆನ್ನಲ್ಲೇ, ಜಿಲ್ಲೆಯಾದ್ಯಂತ ಆಕ್ರೋಶದ ಜ್ವಾಲೆ ಹೊತ್ತಿ ಉರಿದಿದೆ.ರೊಚ್ಚಿಗೆದ್ದ ಜನ ಮೃತದೇಹವನ್ನೇ ರಸ್ತೆಯಲಿಟ್ಟು ಅರಣ್ಯ ಸಚಿವರ ವಿರುದ್ಧ ಘೋಷಣೆಕೂಗಿ ಕಾಡಾನೆಗಳನ್ನು ಹಿಡಿದು ಬೇರೆಡೆ ಸಾಗಿಸಬೇಕೆಂದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಗ್ರಾಮ ಇಂದು ಮರಣ ಮೃದಂಗಕ್ಕೆ ಸಾಕ್ಷಿಯಾಯಿತು. ಕಳೆದ ಸೋಮವಾರವಷ್ಟೇ ಯಲ್ಲಪ್ಪ ಎಂಬ ಕಾರ್ಮಿಕನನ್ನು ಕೊಂದಿದ್ದ ಅದೇ ಒಂಟಿ ಸಲಗ, ಇಂದು ಹಾವೇರಿ ಮೂಲದ ಬೋರಮ್ಮ ಎಂಬ ಮಹಿಳೆಯನ್ನು ಬಲಿಪಡೆದಿದೆ.
ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಯು ತ್ತಿದ್ದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಂದು ಮತ್ತೊಂದು ಜೀವ ಬಲಿಯಾಗಿದೆ. ಆನೆಗೆ ಮದವೇರಿದೆ ಎಂಬ ಕಾರಣಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅಧಿಕಾರಿಗಳ ನಡೆಯೇ ಈ ಸಾವಿಗೆ ಕಾರಣ ಗ್ರಾಮಸ್ಥರು ಆರೋಪಿಸಿದ್ದಾರೆ.
ದುರಂತವೆಂದರೆ ಸಾವಿನಲ್ಲೂ ಅರಣ್ಯ ಇಲಾಖೆ ಮೃತದೇಹಕ್ಕೆ ಕನಿಷ್ಠ ಗೌರವವನ್ನೂ ಕೊಡಲಿಲ್ಲ. ಆಂಬುಲೆನ್ಸ್ ತರಿಸಿದರೆ ಜನರಿಗೆ ವಿಷಯ ತಿಳಿಯುತ್ತದೆ, ಪ್ರತಿಭಟನೆ ಮಾಡುತ್ತಾರೆಂದು ಹೆದರಿದ ಅಧಿಕಾರಿಗಳು, ಬೋರಮ್ಮ ಅವರ ಶವವನ್ನು ಟಾರ್ಪಲ್ನಲ್ಲಿ ಸುತ್ತಿ ಲಗೇಜ್ ಆಟೋದಲ್ಲಿ ಸಾಗಿಸಲು ಯತ್ನಿಸಿದರು. ಇದನ್ನು ಗಮನಿಸಿದ ಎನ್.ಆರ್.ಪುರ ತಾಲೂಕಿನ ಕಡಬಗೆರೆ ಗ್ರಾಮಸ್ಥರು ಆಟೋವನ್ನು ಅಡ್ಡಗಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆ ಮಧ್ಯೆಯೇ ಮೃತದೇಹವನ್ನಿಟ್ಟು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.ಸ್ಥಳಕ್ಕೆ ಶೃಂಗೇರಿ ಶಾಸಕ ರಾಜೇಗೌಡ ಭೇಟಿ ನೀಡಿದಾಗ ಮಲೆನಾಡಿಗರ ಆಕ್ರೋಶ ಮುಗಿಲುಮುಟ್ಟಿತ್ತು. ಈವರೆಗೆ ಒಟ್ಟು ೯ ಜನ ಆನೆ ದಾಳಿಗೆ ಬಲಿಯಾಗಿದ್ದಾರೆ.
ಸತ್ತ ಮೇಲೆ ನೀವು ಕೊಡುವ ೨೦ ಲಕ್ಷ ರೂಪಾಯಿ ಹಣ ಒಂದು ಜೀವವನ್ನು ಮರಳಿ ತರಲು ಸಾಧ್ಯವೇ? ಎಂದು ಜನ ಶಾಸಕರನ್ನು ಪ್ರಶ್ನಿಸಿದರು. ಅರಣ್ಯ ಸಚಿವರು ಸ್ಥಳಕ್ಕೆ ಬರುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು, ಪರಿಹಾರಕ್ಕಿಂತ ನಮಗೆ ಸಮಸ್ಯೆಗೆ ಶಾಶ್ವತ ಪರಿಹಾರಬೇಕೆಂದು ಗುಡುಗಿದರು.
ಜನರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ, ಮಹಿಳೆ ಬಲಿಯಾದ ಅರ್ಧ ಗಂಟೆಯಲ್ಲೇ ಬೆರಣಗೋಡು ಸಮೀಪದ ಕೆರೆಮನೆ ಬಳಿ ಹಂತಕ ಸಲಗವನ್ನು ಸೆರೆಹಿಡಿದ್ದಾರೆ.ವೈದ್ಯರ ತಂಡ ಯಶಸ್ವಿಯಾಗಿ ಅರವಳಿಕೆ ಚುಚ್ಚುಮದ್ದು ನೀಡಿದ್ದು, ಆನೆ ಪ್ರಜ್ಞೆ ತಪ್ಪಿ ಬಿದ್ದಿದೆ. ಆದರೆ ಆನೆಯನ್ನು ಲಾರಿಗೆ ಏರಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ.
ನಾಲ್ಕು ಸಾಕಾನೆಗಳು ಸೇರಿ ತಳ್ಳಿದರೂ ಅಲುಗಾಡದ ಆನೆಯನ್ನು ಸೆರೆಹಿಡಿಯಲು ಸಾಕಾನೆಗಳೇ ಹೈರಾಣಾಗಿವೆ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಾರಕಕ್ಕೇರಿದ್ದು, ಜನ ಮಾತ್ರ ಇನ್ನೂ ಆತಂಕದಲ್ಲೇ ದಿನದೂಡುವಂತಾಗಿದೆ.
Another female laborer dies in wild elephant attack
Leave a comment