ಅಜ್ಜಂಪುರ: ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ಒಂದೇ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ದುರ್ಗಾಂಬಾದೇವಿ ಸುಕ್ಷೇತ್ರವಾಗಿರುವ ಈ ಗ್ರಾಮದಲ್ಲಿ ರಾತ್ರಿ ಖದೀಮರು ಏಳು ಮನೆಗಳ ಬೀಗ ಮುರಿದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.
ಗ್ರಾಮದ ಶಂಕರನಾರಾಯಣ ಅವರ ಮನೆಯ ಗೇಟಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಸುಮಾರು 50 ಸಾವಿರ ರೂಪಾಯಿ ನಗದು ಮತ್ತು ಒಂದು ಜೊತೆ ಚಿನ್ನದ ಕಿವಿ ಓಲೆಯನ್ನು ಕಳ್ಳತನ ಮಾಡಿದ್ದಾರೆ.
ಇದೇ ರೀತಿ ಕುಬೇರಪ್ಪ ಎಂಬುವವರ ಮನೆಯಿಂದ 5 ಸಾವಿರ ರೂಪಾಯಿಗಳನ್ನು ಕಳವು ಮಾಡಲಾಗಿದೆ. ಉಳಿದ ಐದು ಮನೆಗಳಲ್ಲೂ ಬೀಗ ಮುರಿಯಲಾಗಿದ್ದರೂ, ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಕಾರಣ ಕಳ್ಳರು ಬರಿಗೈಲಿ ವಾಪಸ್ಸಾಗಿದ್ದಾರೆ.
ಮನೆಯವರು ಊರಿನಲ್ಲಿ ಇಲ್ಲದ ಸಮಯವನ್ನು ಹೊಂಚು ಹಾಕಿ ಈ ಕೃತ್ಯ ಎಸಗಲಾಗಿದೆ. ಅಂತರಘಟ್ಟೆ ಗ್ರಾಮದಲ್ಲಿ ಇಂತಹ ಸರಣಿ ಕಳ್ಳತನದ ಪ್ರಕರಣ ಇದೇ ಮೊದಲು ಎನ್ನಲಾಗಿದ್ದು, ಗ್ರಾಮದ ಹಿರಿಯರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಹೊರಠಾಣೆ ಇದ್ದರೂ ಇಷ್ಟು ದೊಡ್ಡ ಮಟ್ಟದ ಕಳ್ಳತನ ನಡೆದಿರುವುದು ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.
ಇಲ್ಲಿನ ದುರ್ಗಾಂಬಾ ದೇವಾಲಯದ ಹುಂಡಿಗಳಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದು, ಇತ್ತೀಚೆಗಷ್ಟೇ ಜಾತ್ರೆ ನಡೆದಿದ್ದರಿಂದ ಹುಂಡಿಗಳು ತುಂಬಿವೆ. ಹೀಗಾಗಿ ಮುಜರಾಯಿ ಇಲಾಖೆ ಹಾಗೂ ಪೊಲೀಸರು ದೇವಾಲಯಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಬೇಕು. ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Serial theft in Antaraghatte village
Leave a comment