ಚಿಕ್ಕಮಗಳೂರು: ಪ್ರವಾಸೋದ್ಯಮ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ೧೩೩ ಮಕ್ಕಳಿಗೆ ಉಚಿತವಾಗಿ ೫ ದಿನಗಳ ಕಾಲ ರಾಜ್ಯದ ವಿವಿಧ ತಾಣಗಳಿಗೆ ಏರ್ಪಡಿಸಲಾಗಿರುವ ಪ್ರವಾಸ ಕಾರ್ಯಕ್ರಮಕ್ಕೆ ಸೋಮವಾರ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದೇಶ ಸುತ್ತಬೇಕು, ಕೋಶ ಓದಬೇಕು ಎನ್ನುವ ನಾಣ್ನುಡಿ ಇದೆ. ಇದೆರಡಕ್ಕೂ ಇಂದು ಹಿಂದಿನಷ್ಟು ಕಷ್ಟವಿಲ್ಲ. ದೇಶ ಸುತ್ತಬೇಕೆಂದರೆ ಸಾಕಷ್ಟು ಸಾರಿಗೆ ಸೌಲತ್ತುಗಳಿವೆ. ಕೋಶ ಓದಬೇಕೆಂದರೆ ಸರ್ಕಾರವೇ ಸಾಕಷ್ಟು ಪುಸ್ತಕಗಳನ್ನು ಉಚಿತವಾಗಿ ಪೂರೈಸುತ್ತದೆ. ಇನ್ನು ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳಲು ಮೊಬೈಲ್, ಇಂಟರ್ನೆಟ್ ಇದೆ ಅದನ್ನೆಲ್ಲಾ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸ ಏರ್ಪಡಿಸಿದೆ. ಪ್ರವಾಸದ ಸಂದರ್ಭದಲ್ಲಿ ಎಲ್ಲಾ ಮಕ್ಕಳ ಯೋಗಕ್ಷೇಮ ಮುಖ್ಯವಾಗಿರುತ್ತದೆ. ಬಡವರ ಮಕ್ಕಳು ಪ್ರವಾಸ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಇಓ ಮತ್ತು ಸಿಬ್ಬಂದಿ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ಹಲವಾರು ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಅಲ್ಲಿಗೆ ಹೋದಾಗ ಮಹಾತ್ಮರ ವಿಚಾರಧಾರೆಗಳನ್ನು ಅರಿತುಕೊಂಡು ಉನ್ನತ ಕನಸು ಕಾಣಬೇಕು. ಪ್ರಬಂಧ ಬರೆದು ಇತರರಿಗೂ ಅದು ಗೊತ್ತಾಗುವಂತಾಗಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ೫ ದಿನದ ಕರ್ನಾಟಕ ದರ್ಶನ ಪ್ರವಾಸದಲ್ಲಿ ಗೈಡ್ಗಳು ಸಹ ಇರುತ್ತಾರೆ. ಅವರು ಕ್ಷೇತ್ರದ ಮಹತ್ವವನ್ನು ವಿವರಿಸಲಿದ್ದಾರೆ. ಮಕ್ಕಳು ಮೊಬೈಲ್ಗಳನ್ನ ಕೊಂಡೊಯ್ಯಬಾರದು. ಪ್ರವಾಸವನ್ನು ಅಚ್ಚುಕಟ್ಟಾಗಿ ನೋಡಬೇಕೆಂದರೆ ಯಾವುದೇ ಝಂಕ್ ಫುಡ್ಗಳನ್ನ ತಿನ್ನುವಂತಿಲ್ಲ. ಎಲ್ಲರಿಗೂ ಒಳ್ಳೆಯ ಊಟ, ವಸತಿ ವ್ಯವಸ್ಥೆಯನ್ನು ನಾವು ಮಾಡಿರುತ್ತೇವೆ ಎಂದರು.
ವ್ಯಯಕ್ತಿಕವಾಗಿ ಈ ಪ್ರವಾಸ ಹೋಗುವುದಾದರೆ ಪ್ರತಿಯೊಬ್ಬರಿಗೆ ಕನಿಷ್ಠ ೧೫ ಸಾವಿರ ರೂ. ವೆಚ್ಚವಾಗುತ್ತದೆ. ಇದನ್ನು ಪ್ರವಾಸೋದ್ಯಮ ಇಲಾಖೆ, ಶಿಕ್ಷಣ ಇಲಾಖೆ ಉಚಿತವಾಗಿ ನೀಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳು ಹಾಗೂ ಪೋಷಕರು ಯಾವುದೇ ರೀತಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ವೇಳೆ ಆರು ಮಂದಿ ಶಿಕ್ಷಕರು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿ ಪೋಷಕರು ಇದ್ದರು.
School children’s Karnataka Darshan begins
Leave a comment