ಚಿಕ್ಕಮಗಳೂರು: ಧರ್ಮದ ರಕ್ಷಣೆಯಾಗಬೇಕು, ಅಧರ್ಮದ ನಾಶವಾಗಬೇಕೆಂಬುದು ಹಾಗೂ ನ್ಯಾಯಕ್ಕೆ ಜಯ, ಸತ್ಯಕ್ಕೆ ಜಯ ಸಿಗಬೇಕೆಂಬುದು ನಾಡಹಬ್ಬ ದಸರಾದ ಪ್ರಮುಖ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ಅವರು ಸಮೀಪಕ ಬೀಕನಹಳ್ಳಿಯಲ್ಲಿ ನಡೆದ ದಸರಾ ಹಬ್ಬದ ಅಂಗವಾಗಿ ಜಂಬೂ ಸವಾರಿಯೊಂದಿಗೆ ಅಂಬು ಒಡೆಯುವ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ ಸತ್ಯ, ನ್ಯಾಯ, ನೀತಿಗೆ ಜಯಸಿಗಬೇಕೆಂಬ ಪರಂಪರೆಯನ್ನು ಮುಂದುವರೆಸಿಕೊಂಡು ಬರಬೇಕೆಂಬ ಕಾರಣದಿಂದ ಚಾಮುಂಡೇಶ್ವರಿ ಉತ್ಸವ ಬೀಕನಹಳ್ಳಿಯಲ್ಲಿ ವಿಜೃಂಭಣೆಯಿಂದ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಹಿಂದೆ ಕೋರೆ ಹಲ್ಲು ರಾಕ್ಷಸರಿದ್ದರು. ಆದರೆ ಈಗ ಇಲ್ಲ. ರಾಕ್ಷಸಿಯ ಮನಸ್ಥಿತಿಯವರಿದ್ದಾರೆ. ನೀತಿ ಬಿಟ್ಟವರು ರಾಕ್ಷಸರು, ಅಧರ್ಮದ ಪರವಾಗಿ ನಿಲ್ಲುವವರು, ಧರ್ಮ ನಾಶಮಾಡುವವರು ರಾಕ್ಷಸರು. ಅಂತಹ ಮನಸ್ಥಿತಿ ನಾಶವಾಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದರು.
ಸಜ್ಜನ ಶಕ್ತಿಗೆ ಬಲ ಬರಲಿ, ರಕ್ತಪಾತ ಕೊನೆಗಾಣಲಿ, ಸಜ್ಜನರು ಒಗ್ಗಟ್ಟಾದಾಗ ದುರ್ಜನರು ಬಾಲ ಬಿಚ್ಚಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದಸರಾ ಉತ್ಸವ ಒಗ್ಗಟ್ಟಿನ ಧಾರ್ಮಿಕತೆಯ ದ್ಯೋತಕವಾಗಿದೆ ಎಂದು ಹೇಳಿದರು.
ರಾಕ್ಷಸರ ಸಂಹಾರಕ್ಕಾಗಿ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆಯೆರೆದು ಚಾಮುಂಡೇಶ್ವರಿಗೆ ಬಲ ಕೊಟ್ಟಿದ್ದು ಇತಿಹಾಸವಾಗಿದ್ದು, ಅದರ ಭಾಗವಾಗಿ ಎಲ್ಲರೂ ಒಗ್ಗೂಡುವ ಮೂಲಕ ಧಾರ್ಮಿಕತೆಗೆ ಅರ್ಥ ತುಂಬಬೇಕೆಂದು ಮನವಿ ಮಾಡಿದರು.
ಮೆರವಣಿಗೆಯಲ್ಲಿ ಬಣ್ಣ ಬಣ್ಣದ ಸಿಡಿಮದ್ದು, ಬಸವನ ಅಲಂಕಾರ, ಡೊಳ್ಳು ಕುಣಿತ, ಭಜನೆ, ಚಟ್ಟಿಮೇಳ, ಕೋಲಾಟ, ಜಾನಪದ ನೃತ್ಯ, ಹೆಣ್ಣು ಮಕ್ಕಳಿಂದ ಆರತಿ, ಭಕ್ತರ ಮನಸೂರೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಬಿ.ಪಿ ನಂಜಪ್ಪ, ಉಪಾಧ್ಯಕ್ಷ ಬಿ.ಹೆಚ್ ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ ಯೋಗಾನಂದ್, ಖಜಾಂಚಿ ಬಿ.ಹೆಚ್ ಸೋಮೇಗೌಡ, ಸದಸ್ಯರುಗಳಾದ ನಂಜುಂಡಪ್ಪ, ಗುರುಸಿದ್ದಪ್ಪ, ಯತಿರಾಜ್. ಲೋಕನಾಥ್, ಹೆಚ್.ಪಿ ಮಂಜೇಗೌಡ, ರಂಗಪ್ಪ, ಬಿ.ಎಂ ನಾಗರಾಜು, ಲಲಿತಾ ಬಸವರಾಜ್ ಉಪಸ್ಥಿತರಿದ್ದರು.
Protection of Dharma-Destroy of Adharma is the purpose of Nadahabba Dasara
Leave a comment