ಚಿಕ್ಕಮಗಳೂರು: ನೆರೆಯ ಮಹಾರಾಷ್ಟ್ರದ ಮರಾಠಿಗಳ ಪುಂಡಾಟಿಕೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ನೀಡಿದ್ದ ಕರ್ನಾಟಕ ಬಂದ್ಗೆ ಕಾಫಿಯ ನಾಡಿನಲ್ಲಿ ಸ್ಪಂದನೆ ಇರಲಿಲ್ಲ, ಇಡೀ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸುವ ಮೂಲಕ ಎಂಇಎಸ್ ಕಾರ್ಯಕರ್ತರ ದೌರ್ಜನ್ಯವನ್ನು ಖಂಡಿಸಬೇಕು. ಈ ಮೂಲಕ ಅವರಿಗೆ ಎಚ್ಚರಿಕೆಯನ್ನು ನೀಡಬೇಕೆಂದು ಬಂದ್ಗೆ ಕರೆ ನೀಡಲಾಗಿತ್ತು.
ಬಂದ್ ಯಶಸ್ವಿ ಹಿನ್ನಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಜತೆಗೆ ಆಟೋ ಚಾಲಕರು, ಹೋಟೆಲ್ ಮಾಲೀಕರು, ಟ್ಯಾಕ್ಸಿ ಚಾಲಕರ ಸಂಘದವರು ಬೆಂಬಲ ಸೂಚಿಸುದಾಗಿ ಭರವಸೆ ನೀಡಿದ್ದರು. ಆದರೆ, ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಹೊರತುಪಡಿಸಿ ಜಿಲ್ಲೆಯ ಇನ್ನುಳಿದ ಯಾವುದೇ ತಾಲೂಕುಗಳಲ್ಲಿ ಬಂದ್ನ ವಾತಾವರಣ ಇರಲಿಲ್ಲ, ಎಂದಿನಂತೆ ಜನರ ಓಡಾಟ, ಬಸ್, ಆಟೋ, ಟ್ಯಾಕ್ಸಿಗಳು ಸಂಚರಿಸುತ್ತಿದ್ದವು. ಅಂಗಡಿಗಳು ಓಪನ್ ಆಗಿದ್ದವು. ಯಾವುದೇ ರೀತಿಯ ಪ್ರತಿಭಟನೆಗಳು, ತಾಲೂಕು ತಹಶೀಲ್ದಾರ್ಗಳಿಗೆ ಮನವಿ ಸಲ್ಲಿಕೆ ಆಗಿಲ್ಲ.
ಆದರೆ, ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ ಬಂದ್ ವಾತಾವರಣ ಇತ್ತು. ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬೆಳಿಗ್ಗೆ 6 ಗಂಟೆಯಿಂದಲೇ ರೋಡ್ಗೆ ಇಳಿದ್ದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ಬಸ್ಗಳನ್ನು ಸಂಚರಿಸದಂತೆ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಮನವಿ ಮಾಡಿಕೊಂಡರು. ಪ್ರಯಾಣಿಕರೂ ಸಹ ಕೋರಿ ಕೊಂಡರು. ಇಲ್ಲಿರುವ ಅಂಗಡಿಗಳನ್ನು ಮುಚ್ಚಿ ಸಹಕರಿಸುವಂತೆ ಹೇಳಿದರು.
ಸ್ಥಳದಲ್ಲಿ ಉತ್ತಮ ಸ್ಪಂದನೆ ಇರಲಿಲ್ಲ, ಇಲ್ಲಿನ ಎಂ.ಜಿ. ರಸ್ತೆ, ಐ.ಜಿ. ರಸ್ತೆ, ಮಾರ್ಕೇಟ್ ರಸ್ತೆ, ವಿಜಯಪುರ, ಬಸವನಹಳ್ಳಿ ಮುಖ್ಯ ರಸ್ತೆಗಳಲ್ಲಿ ಬೆಳಿಗ್ಗೆ ಕೆಲವು ಅಂಗಡಿಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದವು. ಕೆಲವೆಡೆ ಪ್ರತಿಭಟನಾಕಾರರು ಸಂಚರಿಸಿ ಬಂದ್ಗೆ ಸಹಕರಿಸುವಂತೆ ಮನವಿ ಮಾಡಿದರು. ಹಾಗಾಗಿ ಹಲವೆಡೆ ಪೂರ್ಣ ಪ್ರಮಾಣಲ್ಲಿ ಬಂದ್ ಆಗಿರಲಿಲ್ಲ. ಕೆಲವು ಹೋಟೆಲ್ಗಳು ಓಪನ್ ಆಗಿದ್ದವು. ಆಟೋ, ಕೆಎಸ್ಆರ್ಟಿಸಿ, ಖಾಸಗಿ ಬಸ್ ಸಂಚಾರ ಎಂದಿನಂತೆ ಇತ್ತು.
ಮಧ್ಯಾಹ್ನದ ವೇಳೆಗೆ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಕನ್ನಡಪರ ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಹೊರಟರು, ಈ ಮೆರವಣಿಗೆ ಕೆ.ಎಂ. ರಸ್ತೆ, ಐ.ಜಿ. ರಸ್ತೆ, ರತ್ನಗಿರಿ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿ ಎಂ.ಜಿ. ರಸ್ತೆಯ ಮೂಲಕ ಬೇಲೂರು ರಸ್ತೆಯಿಂದ ಹಿರೇಮಗಳೂರಿಗೆ ತೆರಳಿತು. ಒಟ್ಟಾರೆ ಜಿಲ್ಲಾ ಕೇಂದ್ರದಲ್ಲಿ ಶಾಂತಿಯುತವಾಗಿ ಮೆರವಣಿಗೆ, ಬಂದ್ ನಡೆಯಿತು.
ಬಂದ್ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
Karnataka bandh gets lackluster response in the coffee-producing district
Leave a comment